ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಫೆಬ್ರುವರಿ 26ಕ್ಕೆ ತನಿಖೆಗೆ ಹಾಜರಾಗುವಂತೆ ಸಿಬಿಐ ಸೋಮವಾರ ನೋಟಿಸ್ ನೀಡಿದೆ.
ಇದಕ್ಕೂ ಮೊದಲು, ಫೆ.19 (ಭಾನುವಾರ) ತನಿಖೆಗೆ ಹಾಜರಾಗುವಂತೆ ಸಿಸೋಡಿಯಾ ಅವರಿಗೆ ಸಿಬಿಐ ಸೂಚಿಸಿತ್ತು. ಆದರೆ, ಬಜೆಟ್ ಸಿದ್ಧತೆ ಇರುವುದರಿಂದ ಬೇರೊಂದು ದಿನಾಂಕ ನೀಡುವಂತೆ ದೆಹಲಿಯ ಹಣಕಾಸು ಸಚಿವರೂ ಆಗಿರುವ ಸಿಸೋಡಿಯಾ ಅವರು ಸಿಬಿಐಗೆ ಮನವಿ ಮಾಡಿದ್ದರು. ಈ ಮನವಿಯನ್ನು ಸಿಬಿಐ ಮಾನ್ಯ ಮಾಡಿತ್ತು.
‘ಫೆಬ್ರುವರಿ 26ರಂದು ತನಿಖೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿದೆ. ಅಂದು ತನಿಖೆಗೆ ಹಾಜರಾಗುತ್ತೇನೆ’ ಎಂದು ಸಿಸೋಡಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.