ನವದೆಹಲಿ: ವಂಚಕ, ಬೆಂಗಳೂರಿನ ಸುಕೇಶ್ ಚಂದ್ರಶೇಖರ್ ಮತ್ತು ಆತನ ಪತ್ನಿಯನ್ನು ತಿಹಾರ್ ಜೈಲಿನಿಂದ ಪೂರ್ವ ದೆಹಲಿಯ ಮಂಡೋಲಿ ಜೈಲಿಗೆ ಸ್ಥಳಾಂತರಿಸಬಹುದು ಎಂದು ಜಾರಿ ನಿರ್ದೇಶನಾಲಯ (ಇ.ಡಿ)ವು ಸುಪ್ರೀಂ ಕೋರ್ಟ್ಗೆ ಗುರುವಾರ ತಿಳಿಸಿದೆ.
ಸುಕೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್.ಬಸಂತ್, ತಮ್ಮ ಕಕ್ಷಿದಾರರ ವಿರುದ್ಧ ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿರುವುದರಿಂದ ಅಲ್ಲಿರುವ ಜೈಲಿಗೆ ಅಥವಾ ದೆಹಲಿಯ ಹೊರಗಿನ ಜೈಲಿಗೆ ಸ್ಥಳಾಂತರಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಿ. ಟಿ. ರವಿಕುಮಾರ್ ಮತ್ತು ಸುಧಾಂಶು ಧುಲಿಯಾ ಅವರ ರಜಾಕಾಲದ ಪೀಠಕ್ಕೆ ಮನವಿ ಸಲ್ಲಿಸಿದರು.
ತನ್ನ ಕಕ್ಷಿದಾರನನ್ನು ಮಂಡೋಲಿ ಜೈಲಿಗೆ ವರ್ಗಾಯಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಸಂತ್, ಜೈಲು ದೆಹಲಿಯ ಹೊರಗಿರಬೇಕು ಹಾಗೂ ಅವರನ್ನು ಗಾಜಿಯಾಬಾದ್ ಜೈಲಿನಲ್ಲಿ ಇರಿಸಬಹುದು. ಆದರೆ, ದೆಹಲಿ ಆಡಳಿತದಲ್ಲಿರುವ ಯಾವುದೇ ಜೈಲಿನಲ್ಲಿರಿಸಬಾರದು ಎಂದು ಹೇಳಿದರು.
ತನ್ನ ಕಕ್ಷಿದಾರನನ್ನು ದೆಹಲಿಯ ಮತ್ತೊಂದು ಜೈಲಿಗೆ ವರ್ಗಾಯಿಸುವುದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಪೀಠವು ಬಸಂತ್ಗೆ ಸೂಚಿಸಿತು.