ನವದೆಹಲಿ: ಅರವಿಂದ ಕೇಜ್ರಿವಾಲ್ ಸರ್ಕಾರದ ವಿವಾದಿತ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ದೆಹಲಿ ಪಾಲಿಕೆ ಚುನಾವಣೆಯ ಉಸ್ತುವಾರಿ ದುರ್ಗೇಶ್ ಪಾಠಕ್ ಅವರನ್ನು ಪ್ರಶ್ನಿಸಿದೆ.
ಅಬಕಾರಿ ನೀತಿಗೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಪಾಠಕ್ ಅವರಿಗೆ ನೀಡಿರುವ ಸಮನ್ಸ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎಎಪಿಯು, ಇ.ಡಿಯು ಅಬಕಾರಿ ನೀತಿ ಅಥವಾ ಪಾಲಿಕೆಯ ಚುನಾವಣೆಯನ್ನು ಗುರಿಯಾಗಿಸಿಕೊಂಡಿದೆಯೇ ಎಂದು ಟೀಕಿಸಿದೆ.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ನಡೆದಿರುವ ಹಣ ಅಕ್ರಮ ವರ್ಗಾವಣೆ ಹಗರಣದ ವಿಚಾರಣೆಯ ಸಂಬಂಧ ದುರ್ಗೇಶ್ ಪಾಠಕ್ ಅವರು ಇ.ಡಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಗರಣದಲ್ಲಿ ಪಾಠಕ್ ಅವರ ಪಾತ್ರವೇನು? ಮನರಂಜನಾ ಮತ್ತು ಈವೆಂಟ್ ನಿರ್ವಹಣಾ ಕಂಪನಿಯೊಂದರ ಮಾಜಿ ಕಾರ್ಯ ನಿರ್ವಹಣಾಧಿಕಾರಿ, ಪ್ರಕರಣದ ಆರೋಪಿ ವಿಜಯ್ ನಾಯರ್ ಜತೆಗಿನ ಸಂಪರ್ಕದ ಕುರಿತಾಗಿ ಪಾಠಕ್ ಅವರು ಪ್ರಶ್ನೆಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ 40 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ದಾಳಿ ನಡೆಸಿದ ಮೂರು ದಿನಗಳ ಬಳಿಕ ಪಾಠಕ್ ಅವರ ವಿಚಾರಣೆ ನಡೆದಿದೆ.