ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ದಿನ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಯಾವುದೇ ರೀತಿಯ ವಿಜಯೋತ್ಸವ ಹಾಗೂ ಮೆರವಣಿಗೆಗಳನ್ನು ನಡೆಸಬಾರದು ಎಂದು ಚುನಾವಣೆ ಆಯೋಗ ಹೇಳಿದೆ.
ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ತೀವ್ರವಾಗಿರುವುದರಿಂದ ವಿಜಯೋತ್ಸವ ಹಾಗೂ ಮೆರವಣಿಗೆಗಳನ್ನು ನಿಷೇಧಿಸಿ ಚುನಾವಣೆ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿತ್ತು. ಈಗಾಗಲೇ 7 ಹಂತಗಳ ಮತದಾನ ಮುಕ್ತಾಯವಾಗಿದ್ದು ಏಪ್ರಿಲ್ 29ರಂದು ನಡೆಯಲಿರುವ ಕೊನೆಯ ಹಂತದ ಮತದಾನ ಬಾಕಿ ಇದೆ.
ಮುಂಬರುವ ಭಾನುವಾರ(ಮೇ 2) ಮತ ಏಣಿಕೆ ನಡೆಯಲಿದೆ. ಆ ದಿನ ಯಾರೂ ಕೂಡ ವಿಜಯೋತ್ಸವ ಹಾಗೂ ಮೆರವಣಿಗೆ ನಡೆಸಬಾರದು ಎಂದು ಆಯೋಗ ತಿಳಿಸಿದೆ.
ಚುನಾವಣಾ ಸಮಿತಿಯು ಕೋವಿಡ್ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ಪಕ್ಷಗಳ ನಾಯಕರು, ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಅನುಸರಿಸಬೇಕಾದ ಶಿಷ್ಟಾಚಾರಗಳನ್ನು ರೂಪಿಸಿತ್ತು.
ಏತನ್ಮಧ್ಯೆ, ದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಲು ಇತ್ತೀಚೆಗೆ ನಡೆದ ಚುನಾವಣೆಗಳೇ ಕಾರಣ ಎಂಬ ಆರೋಗಳು ಕೇಳಿಬಂದಿವೆ.