ಕೇವಲ ಚುನಾವಣೆ ನಡೆಸುವುದು ಕಾಶ್ಮೀರ ಸಮಸ್ಯೆಗೆ ಪರಿಹಾರವಲ್ಲ: ಮೆಹಬೂಬಾ ಮುಫ್ತಿ

ಶ್ರೀನಗರ: 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆ ಬಳಿಕ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾನುವಾರ, ಕೇವಲ ಚುನಾವಣೆಯನ್ನು ನಡೆಸುವುದರಿಂದ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ ಎಂದಿದ್ದಾರೆ.
'ಕಾಶ್ಮೀರದ ಸಮಸ್ಯೆಯನ್ನು (ಪಾಕಿಸ್ತಾನದೊಂದಿಗೆ) ಪರಿಹರಿಸುವವರೆಗೆ ಮತ್ತು ಪರಿಹರಿಸದ ಹೊರತು ಸಮಸ್ಯೆಗಳು (ಕಣಿವೆಯಲ್ಲಿ) ಉಳಿಯುತ್ತವೆ. ಆರ್ಟಿಕಲ್ 370 ಅನ್ನು ಪುನಃ ಸ್ಥಾಪಿಸುವವರೆಗೆ ಸಮಸ್ಯೆಯು ಪರಿಹಾರವಾಗುವುದಿಲ್ಲ. ಮಂತ್ರಿಗಳು ಬರುತ್ತಾರೆ ಮತ್ತು ಹೋಗುತ್ತಾರೆ. ಕೇವಲ ಚುನಾವಣೆಯನ್ನು ನಡೆಸುವುದು ಸಮಸ್ಯೆಗೆ ಪರಿಹಾರವಲ್ಲ' ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮುಫ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಜನರು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವ ಅಗತ್ಯವಿದೆ ಎಂಬುದನ್ನು ವ್ಯಕ್ತಪಡಿಸಲು ಸಿದ್ಧರಿದ್ದಾರೆ ಎಂದ ಅವರು, 'ನಾವು ಚೀನಾದೊಂದಿಗೆ 9, 10ನೇ ಸುತ್ತಿನ ಮಾತುಕತೆ ನಡೆಸುತ್ತಿದ್ದೇವೆ. (ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿಲ್ಲ) ಅದು ಮುಸ್ಲಿಂ ರಾಷ್ಟ್ರವಾದ್ದರಿಂದಲೇ? ಏಕೆಂದರೆ ಈಗ ಎಲ್ಲವನ್ನೂ ಕೋಮುವಾದವನ್ನಾಗಿ ಮಾಡಲಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಗುಪ್ಕಾರ್ ಮೈತ್ರಿ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ನಾನು ಧ್ವನಿ ಎತ್ತಿದ್ದರಿಂದಾಗಿ ಬಿಜೆಪಿ ನನ್ನ ಪಕ್ಷವನ್ನು ನಿಷೇಧಿಸಲು ಬಯಸಿದೆ ಎಂದು ಆರೋಪಿಸಿದರು.
ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಭಾಗವಹಿಸಲು ತಮ್ಮ ಪಕ್ಷ ನಿರ್ಧರಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ದಬ್ಬಾಳಿಕೆಯ ಮಟ್ಟ ಹೆಚ್ಚಾಗಿದೆ. ಪಿಎಜಿಡಿ (ಗುಪ್ಕಾರ್ ಅಲಯನ್ಸ್) ಅಭ್ಯರ್ಥಿಗಳು ಮಾತ್ರ ಚುನಾವಾಣೆಗೆ ಸೀಮಿತರಾಗಿದ್ದಾರೆ ಮತ್ತು ಪ್ರಚಾರಕ್ಕಾಗಿ ಹೊರಗೆ ಹೋಗಲು ಅನುಮತಿ ನೀಡಿಲ್ಲ. ಪ್ರಚಾರ ಮಾಡಲು ಅನುಮತಿ ನೀಡದಿದ್ದರೆ ಅಭ್ಯರ್ಥಿಗಳು ಹೇಗೆ ಸ್ಪರ್ಧಿಸುತ್ತಾರೆ ಎಂದಿದ್ದಾರೆ.
ಅವರು (ಬಿಜೆಪಿ) ಮುಸ್ಲಿಮರನ್ನು ಪಾಕಿಸ್ತಾನಿ, ಸರ್ದಾರ್ (ಸಿಖ್) ಖಲಿಸ್ತಾನಿ, ಕಾರ್ಯಕರ್ತರನ್ನು 'ನಗರ ನಕ್ಸಲ್' ಮತ್ತು 'ತುಕ್ಡೆ-ತುಕ್ಡೆ ಗ್ಯಾಂಗ್'ನ ವಿದ್ಯಾರ್ಥಿಗಳು ಮತ್ತು ರಾಷ್ಟ್ರ ವಿರೋಧಿ ಎಂದು ಕರೆಯುತ್ತಾರೆ. ಎಲ್ಲರೂ ಭಯೋತ್ಪಾದಕರು ಮತ್ತು ರಾಷ್ಟ್ರ ವಿರೋಧಿಗಳು ಎಂದಾದರೆ ಆಗ ಈ ದೇಶದಲ್ಲಿ ಹಿಂದೂಸ್ತಾನಿಗಳು ಯಾರು? ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ವಿಫಲವಾಗಿದ್ದೇನೆ...' ಎಂದು ದೂರಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.