ಮುಂಬೈ: ಎಲ್ಗಾರ್ ಪರಿಷತ್– ಮಾವೊ ಸಂಪರ್ಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಚಿಂತಕ, ಸಾಮಾಜಿಕ ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಅವರು ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಿಂದ ಶನಿವಾರ ಮಧ್ಯಾಹ್ನ 1.15ಕ್ಕೆ ಬಿಡುಗಡೆಯಾದರು.
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ತೇಲ್ತುಂಬ್ಡೆ ಎರಡೂವರೆ ವರ್ಷಗಳ ಕಾಲ ಜೈಲಿನಲ್ಲಿದ್ದರು. 2020ರ ಏಪ್ರಿಲ್ 14ರಂದು ತೇಲ್ತುಂಬ್ಡೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಬಂಧಿಸಿತ್ತು. ಇದೇ ವರ್ಷ ನ. 18ರಂದು ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಎನ್ಐಎ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.ಅದರಂತೆ ಜಾಮೀನು ಪ್ರಕ್ರಿಯೆ ಮುಗಿದ ಬಳಿಕ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿದ್ದ 16 ಜನರಲ್ಲಿ ತೇಲ್ತುಂಬ್ಡೆ ಅವರು ಜಾಮೀನು ಪಡೆದವರಲ್ಲಿ ಮೂರನೆಯವರು. ಈ ಹಿಂದೆ ಕವಿ ವರವರ ರಾವ್ ಮತ್ತು ವಕೀಲರಾದ ಸುಧಾ ಭಾರದ್ವಾಜ್ ಜಾಮೀನು ಪಡೆದಿದ್ದರು.