ಮುಂಬೈ: ಎಲ್ಗರ್ ಪರಿಷತ್– ಮಾವೋವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ತಜ್ಞೆ ಶೋಮಾ ಸೇನ್ ಮತ್ತು ಇತರ ನಾಲ್ವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ(ಎನ್ಐಎ) ವಿಶೇಷ ನ್ಯಾಯಾಲಯವು ಮಂಗಳವಾರ ಜಾಮೀನು ನಿರಾಕರಿಸಿದೆ.
ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಜೆ. ಕಟಾರಿಯಾ ಅವರು, ಪ್ರೊ.ಶೋಮಾ ಸೇನ್, ಸುಧೀರ್ ದಾವಾಲೆ, ಸಾಮಾಜಿಕ ಕಾರ್ಯಕರ್ತ ರೋನಾ ವಿಲ್ಸನ್, ವಕೀಲ ಸುರೇಂದ್ರ ಗಡ್ಲಿಂಗ್ ಮತ್ತು ಮಹೇಶ್ ರಾವುತ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದರು.
2018ರಲ್ಲಿ ಪುಣೆಯ ಸೆಷೆನ್ಸ್ ನ್ಯಾಯಾಲಯದಲ್ಲಿನ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾಗ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಆರೋಪಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಚ್ಶೀಟ್ ಸಲ್ಲಿಸಲು ಸೆಷೆನ್ಸ್ ನ್ಯಾಯಾಲಯವು ನೀಡಿದ್ದ 90 ದಿನಗಳ ವಿಸ್ತರಣೆಯು ಕಾನೂನುಬಾಹಿರವೆಂದು ಪ್ರತಿಪಾದಿಸಿದ್ದರು. ಈ ಕಾರಣಕ್ಕಾಗಿ ಆರೋಪಿಗಳು ಸಿಆರ್ಪಿಸಿಯ ನಿಬಂಧನೆಗಳ ಅಡಿಯಲ್ಲಿ ಜಾಮೀನಿಗೆ ಅರ್ಹರಾಗಿದ್ದಾರೆ ಎಂದೂ ಅರ್ಜಿಯಲ್ಲಿ ಕೋರಿದ್ದರು.