ನವದೆಹಲಿ:ಎಲ್ಗಾರ್ ಪರಿಷದ್–ಮಾವೊವಾದಿ ಸಂಪರ್ಕ ಪ್ರಕರಣದಲ್ಲಿ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿರಿಸಲು ಗುರುವಾರ ಅನುಮತಿ ನೀಡಿರುವಸುಪ್ರೀಂ ಕೋರ್ಟ್,ವೈದ್ಯಕೀಯ ವರದಿ ತಿರಸ್ಕರಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠ 70 ವರ್ಷದ ಗೌತಮ್ ಅವರನ್ನು ಮುಂಬೈನಲ್ಲಿ ಒಂದು ತಿಂಗಳು ಗೃಹಬಂಧನದಲ್ಲಿರಿಸುವ ಆದೇಶವನ್ನು 48 ಗಂಟೆಗಳ ಒಳಗೆ ಜಾರಿಗೆ ತರಬೇಕು ಎಂದು ಹೇಳಿದೆ.
ಪೊಲೀಸ್ ಸಿಬ್ಬಂದಿ ಲಭ್ಯವಿರುವಂತೆ ಮಾಡಲು ವೆಚ್ಚವಾಗಿ ಅಂದಾಜು ₹ 2.4 ಲಕ್ಷ ಠೇವಣಿ ಇಡುವಂತೆ ನವ್ಲಾಖಾಗೆ ಎನ್ಐಎ ನಿರ್ದೇಶನ ನೀಡಿದೆ.
ಗೃಹಬಂಧನ ಅವಧಿಯಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಲು ಅನುಮತಿ ನೀಡಿಲ್ಲ. ಟಿ.ವಿ ವೀಕ್ಷಣೆ ಮತ್ತು ದಿನಪತ್ರಿಕೆ ಓದಲು ಅವಕಾಶ ನೀಡಲಾಗಿದೆ.ಮುಂಬೈ ತೊರೆಯುವಂತಿಲ್ಲ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯಾವುದೇ ರೀತಿಯಲ್ಲಿ ಪ್ರಯತ್ನಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಅರ್ಜಿದಾರರು ಎಲ್ಲಾ ಷರತ್ತುಗಳಿಗೆ ಬದ್ಧರಾಗಿರಬೇಕು. ನಿಯಮ ಉಲ್ಲಂಘಿಸಿದರೆ ಆದೇಶವನ್ನು ತಕ್ಷಣವೇ ರದ್ದುಗೊಳಿಸಬಹುದು ಎಂದು ತಿಳಿಸಿದೆ.