ಪೂರ್ವ ಲಡಾಖ್ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ: ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ: ಪೂರ್ವ ಲಡಾಖ್ನ ಗಡಿಪ್ರದೇಶದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ರಾಜತಾಂತ್ರಿಕ ಮಟ್ಟದಲ್ಲಿ ಎರಡೂ ಕಡೆಯಿಂದ ಹೆಚ್ಚಿನ ಮಾತುಕತೆ ಅಗತ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚೀನಾದೊಂದಿಗಿನ ಗಡಿಯ ಪರಿಸ್ಥಿತಿಯನ್ನು ಆ ದೇಶದ ಜೊತೆಗಿನ ಒಟ್ಟಾರೆ ಸಂಬಂಧದಿಂದ ಬೇರ್ಪಡಿಸಲಾಗದು. ಗಾಲ್ವನ್ ಕಣಿವೆಯ ದುರದೃಷ್ಟಕರ ಘಟನೆ ಸಂಭವಿಸುವ ಮೊದಲೇ ಅದನ್ನು ನಾನು ಬರೆದಿದ್ದೇನೆ ಎಂದು ತಮ್ಮ ಹೊಸ ಪುಸ್ತಕ ‘ದಿ ಇಂಡಿಯಾ ವೇ’ ಉಲ್ಲೇಖಿಸಿ ಹೇಳಿದ್ದಾರೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ರಷ್ಯಾದ ಮಾಸ್ಕೊದಲ್ಲಿ ಈ ವಾರಾಂತ್ಯ ಜೈಶಂಕರ್ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ಸಭೆಯ ಸಂದರ್ಭ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಲಡಾಖ್ ಗಡಿ ಸಂಘರ್ಷ: ಭಾರತ–ಚೀನಾ ಸೇನಾ ಪಡೆಗಳಿಂದ ಗುಂಡಿನ ಚಕಮಕಿ
ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಇಲ್ಲದಿದ್ದರೆ ಉಳಿದ ಬಾಂಧವ್ಯ ಚೆನ್ನಾಗಿ ಸಾಗುವುದು ಸಾಧ್ಯವಿಲ್ಲ. ಯಾಕೆಂದರೆ ಶಾಂತಿ ಮತ್ತು ನೆಮ್ಮದಿಯು ಉಭಯ ರಾಷ್ಟ್ರಗಳ ನಡುವಣ ಒಟ್ಟು ಬಾಂಧವ್ಯದ ತಳಹದಿಯಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಚೀನಾ ವಿದೇಶಾಂಗ ಸಚಿವರ ಜೊತೆಗಿನ ಮಾತುಕತೆ ವೇಳೆ ಅವರ ಬಳಿ ಏನು ಹೇಳಲಿದ್ದೇನೆ ಎಂಬುದನ್ನು ಈಗಲೇ ಹೇಳಲಾಗದು ಎಂದೂ ಅವರು ಹೇಳಿದ್ದಾರೆ.
ಜೂನ್ 15ರಂದು ಗಾಲ್ವನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 21 ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ.
ಪೂರ್ವ ಲಡಾಖ್ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಭಾರತ–ಚೀನಾ ಸೇನಾ ಪಡೆಗಳ ಮಧ್ಯೆ ಸೋಮವಾರ ರಾತ್ರಿ ಗುಂಡಿನ ಚಕಮಕಿಯೂ ನಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.