ಚಿಂದಿವಾರಾ(ಮಧ್ಯಪ್ರದೇಶ): ನಕಲಿ ಮರಣ ಪತ್ರವನ್ನು ಬಳಸಿ ಕಟ್ಟಡ ಕಾರ್ಮಿಕರಿಗಾಗಿ ಉದ್ದೇಶಿಸಲಾದ ಯೋಜನೆಯಿಂದ ಅಕ್ರಮವಾಗಿ ಹಣ ಸಂಗ್ರಹಿಸಿದ ಆರೋಪದಡಿ ಮಧ್ಯಪ್ರದೇಶ ಸರ್ಕಾರವು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜತೆಗೆ, ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಈ ಸಂಬಂಧ ಜನಪದ್ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭಾನುವಾರ ಆದೇಶ ಹೊರಡಿಸಿದ್ದಾರೆ. ಬೋನಖೇಡಿ ಪಂಚಾಯತ್ ಕಾರ್ಯದರ್ಶಿ ರಾಕೇಶ್ ಚಾಂದೇಲ್,ಗ್ರಾಮ ರೋಜಗರ್ ಸಹಾಯಕ ಸಂಜಯ್ ಚೌರೆ, ಪಂಚಾಯತ್ ಸಮನ್ವಯ ಅಧಿಕಾರಿ ಸುನಿಲ್ ಅಂಧವಾನ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.
ಕಟ್ಟಡ ಕಾರ್ಮಿಕರ ಯೋಜನೆಯಡಿ ಚಿಂದಿವಾರಾ ಜಿಲ್ಲೆಯ ಬೋನಖೇಡಿ ಗ್ರಾಮದ 23 ಗ್ರಾಮಸ್ಥರ ನಕಲಿ ಮರಣ ಪತ್ರವನ್ನು ಬಳಸಿ ಹಣ ಪಡೆದಿರುವ ಆರೋಪಡಿ ಜನಪದ್ ಸಿಇಒ ಅವರು ಎಫ್ಐಆರ್ ದಾಖಲಿಸಿದ್ದಾರೆ.
‘ಮಧ್ಯಪ್ರದೇಶ ಸರ್ಕಾರವು ಈ ಬಗ್ಗೆ ತನಿಖೆ ನಡೆಸುವಂತೆ ಶನಿವಾರ ಆದೇಶ ಹೊರಡಿಸಿತ್ತು’ ಎಂದು ಕೃಷಿ ಸಚಿವ ಕಮಲ್ ಪಟೇಲ್ ಅವರು ಮಾಹಿತಿ ನೀಡಿದರು.
ಈ ಯೋಜನೆಯಡಿ 23 ಮಂದಿಯ ನಕಲಿ ಮರಣ ಪತ್ರವನ್ನು ಬಳಸಿ ತಲಾ ₹2 ಲಕ್ಷ ಪಡೆಯಲಾಗಿದೆ ಎಂದು ವರದಿಯೊಂದು ಹೇಳಿದೆ.