ನವದೆಹಲಿ: ತಿಂಗಳಿಗೆ ₹ 45 ಸಾವಿರ ನಿಗದಿಪಡಿಸಲಾಗಿದ್ದ ಕುಟುಂಬ ಪಿಂಚಣಿಯನ್ನು ₹ 1.25 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಈ ಪಿಂಚಣಿ ಸುಧಾರಣೆಯು ಮೃತ ನೌಕರರ ಕುಟುಂಬ ಸದಸ್ಯರಿಗೆ ಸಾಕಷ್ಟು ಆರ್ಥಿಕ ಭದ್ರತೆ ನೀಡಲಿದೆ. ಜತೆಗೆ ಅವರ ಜೀವನಮಟ್ಟವನ್ನೂ ಉತ್ತಮಪಡಿಸಲಿದೆ ಎಂದು ಅವರು ಹೇಳಿದ್ದಾರೆ.
ಒಂದು ಮಗು ತನ್ನ ಹೆತ್ತವರ ಮರಣದ ನಂತರ ಎರಡು ಕುಟುಂಬ ಪಿಂಚಣಿ ಪಡೆಯಲು ಅರ್ಹತೆ ಹೊಂದಿದ್ದರೆ ಆ ಮಗು ಪಡೆಯುವ ಮೊತ್ತವನ್ನು ಈಗ ತಿಂಗಳಿಗೆ ₹ 1,25,000ರವರೆಗೆ ಸೀಮಿತಗೊಳಿಸಲಾಗಿದೆ. ಇದು ಈ ಹಿಂದಿನ ಮಿತಿಗಿಂತ ಎರಡೂವರೆ ಪಟ್ಟು ಹೆಚ್ಚು ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವರೂ ಆದ ಸಿಂಗ್ ಹೇಳಿದ್ದಾರೆ.
ಕೇಂದ್ರ ನಾಗರಿಕ ಸೇವೆಗಳ (ಸಿಸಿಎಸ್) (ಪಿಂಚಣಿ) ನಿಯಮಗಳು 1972ರ ನಿಯಮ 54ರ ಉಪ-ನಿಯಮ (11)ರ ಪ್ರಕಾರ, ಪತ್ನಿ ಮತ್ತು ಪತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಅವರ ಮರಣದ ನಂತರ ಮಗು ಎರಡು ಕುಟುಂಬ ಪಿಂಚಣಿ ಪಡೆಯಲು ಅರ್ಹವಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.