ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ರೈತರ ಮಾತನ್ನು ಆಲಿಸಿ ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ರೈತರಿಗೆ ಸರ್ಕಾರ ಉತ್ತರಿಸಬೇಕಿದೆ. ರೈತರ ಮಾತನ್ನು ಸರ್ಕಾರ ಆಲಿಸಬೇಕು ಮತ್ತು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಮನವಿ ಮಾಡಿದರು.
ರೈತರ ಪ್ರತಿಭಟನೆಯು ರಾಜಕೀಯ ಪಿತೂರಿ ಎಂದು ಆರೋಪಿಸುವುದು ಸಂಪೂರ್ಣ ತಪ್ಪು. ರೈತರ ವಿರುದ್ಧ ಇಂತಹ ಪದ ಪ್ರಯೋಗ ಪಾಪದ ಕೆಲಸವಾಗಿದೆ ಎಂದರು.
ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ದೆಹಲಿಯ ವಿವಿಧ ಗಡಿ ಪ್ರದೇಶಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಡಿಸೆಂಬರ್ 28ರ ಸೋಮವಾರದಂದು 32ನೇ ದಿನಕ್ಕೆ ಕಾಲಿಟ್ಟಿದೆ.
ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮನವಿಯ ಮೆರೆಗೆ ಸುಮಾರು 40 ರೈತ ಸಂಘಟನೆಗಳು ಡಿಸೆಂಬರ್ 29ರಂದು ಮಾತುಕತೆ ನಡೆಸಲು ಸಿದ್ಧವಾಗಿದೆ.