ಮುಂಬೈ: ಮಹಾರಾಷ್ಟ್ರದ ಮುಂಬೈನ ವಿಧಾನಭವನದ ಮುಂದೆಯೇ ರೈತರೊಬ್ಬರು ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ರೈತನನ್ನು ಒಸ್ಮಾನಾಬಾದ್ ಜಿಲ್ಲೆಯ ಸುಭಾಸ್ ದೇಶಮುಖ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಬೆಂಕಿ ನಂದಿಸಿದ್ದರಿಂದ, ಸುಭಾಸ್ ಅವರು ಶೇ 20 ರಷ್ಟು ಸುಟ್ಟ ಗಾಯಗಳಿಂದ ಬದುಕುಳಿದಿದ್ದಾರೆ. ಸದ್ಯ ಅವರನ್ನು ಜಿಟಿ ಆಸ್ಪತ್ರೆಗೆ ದಾಖಲು ಮಾಡಿದೆ.
‘ಇದೊಂದು ದುರದೃಷ್ಟಕರ ಘಟನೆ’ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
‘ಸುಭಾಸ್ ದೇಶಮುಖ್ ಅವರು ತಮ್ಮ ಸಹೋದರನೊಂದಿಗೆ ಭೂವಿವಾದ ಹೊಂದಿದ್ದರು. ಇದೇ ವಿಷಯಕ್ಕಾಗಿ ಅವರ ತಂದೆ ಕೂಡ ಕಳೆದ ಐದಾರು ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಸುಭಾಷ್ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದುಫಡಣವೀಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಧಾನಭವನದ ಮುಂದೆ ರೈತ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಕುರಿತು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ವಿರೋಧಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ವಿಧಾನಭವನ ಮಹಾರಾಷ್ಟ್ರ ಶಾಸನಸಭೆಯ ಭವನವಾಗಿದೆ.