ಬಜೆಟ್ ದಿನದಂದು ರೈತರಿಂದ ಸಂಸತ್ ಮಾರ್ಚ್ಗೆ ಕರೆ

ನವದಹೆಲಿ: ಗಣರಾಜ್ಯೋತ್ಸವದ ದಿನದಂದು (ಜ.26 ಮಂಗಳವಾರ) ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲಿರುವ ರೈತರು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು, ಕೇಂದ್ರ ಸರ್ಕಾರ ಬಜೆಟ್ ಮಂಡಿಸುವ ದಿನದಂದು ಸಂಸತ್ತಿಗೆ ಮಾರ್ಚ್ ನಡೆಸುವ ಯೋಜನೆಯ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ ಕುರಿತು ಗಣರಾಜ್ಯೋತ್ಸವದ ಮುನ್ನಾ ದಿನವಾದ ಸೋಮವಾರದಂದು ರೈತ ಸಂಘಟನೆಗಳ ಮುಖಂಡರು ಮಹತ್ವದ ಆಹ್ವಾನ ನೀಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ವರೆಗೂ ಆಂದೋಲನ ಮುಂದುವರಿಯಲಿದೆ ಎಂದು ಕ್ರಾಂತಿಕಾರಿ ಕಿಸಾನ್ ಒಕ್ಕೂಟದ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.
ನಾವು ಫೆಬ್ರವರಿ 1 ಬಜೆಟ್ ದಿನದಂದು ವಿವಿಧ ಪ್ರದೇಶಗಳಿಂದ ಸಂಸತ್ತಿನತ್ತ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಿದ್ದೇವೆ. ನಾಳೆಯ (ಮಂಗಳವಾರ) ರ್ಯಾಲಿಗೆ ಸಂಬಂಧಪಟ್ಟಂತೆ ಇದು ನಮ್ಮ ಬಲವನ್ನು ಸರ್ಕಾರಕ್ಕೆ ತೋರಿಸಲಿದೆ. ಅಲ್ಲದೆ ಆಂದೋಲನವು ಕೇವಲ ಹರಿಯಾಣ ಅಥವಾ ಪಂಜಾಬ್ಗಷ್ಟೇ ಸೀಮಿತವಾಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಿದ್ದೇವೆ. ಇದು ಇಡೀ ದೇಶದ ಆಂದೋಲನವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರೈತರಿಂದ ಕೃಷಿ ಕಾಯ್ದೆಗಳ ನಿರ್ನಾಮ; ಕೇಂದ್ರವನ್ನು ಎಚ್ಚರಿಸಿದ ಪವಾರ್
ಇಲ್ಲಿಯ ವರೆಗಿನ ರೈತರ ಪ್ರತಿಭಟನೆ, ಚಳವಳಿಯು ಶಾಂತಿಯುತವಾಗಿ ಜರುಗಿದೆ ಎಂದವರು ಮಾಹಿತಿ ಒದಗಿಸಿದರು.
ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸಲು ಬಂದಿರುವ ರೈತರು ಹಿಂತಿರುಗುವುದಿಲ್ಲ. ಅವರು ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸೇರಲಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಆಂದೋಲನ ಮುಂದುವರಿಯುತ್ತದೆ. ನಮ್ಮ ನಿಲುವಿನಲ್ಲಿ ಅಚಲರಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಜಾಥಾವನ್ನು ಗಮನದಲ್ಲಿಟ್ಟುಕೊಂಡು ರಾಜಪಥ ಹಾಗೂ ನವದೆಹಲಿ ವಿವಿಧ ಗಡಿ ಪ್ರದೇಶಗಳಲ್ಲಿ ಸಾವಿರಾರು ಸಶಸ್ತ್ರ ಸಿಬ್ಬಂದಿ ನಿಯೋಜಿಸಲಾಗಿದ್ದು, ಬಹುವಲಯದ ಭದ್ರತಾ ವ್ಯವಸ್ಥೆಯನ್ನು ರಚಿಸಲಾಗಿದೆ.
ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕವಷ್ಟೇ ರೈತರು ಟ್ರ್ಯಾಕ್ಟರ್ ಜಾಥಾ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ಅಲ್ಲದೆ ಜಾಥಾ ಮುಗಿದ ಬಳಿಕ ಹಿಂತಿರುಗಲಿದ್ದಾರೆ.
ಸಿಂಘು, ಟಿಕ್ರಿ ಹಾಗೂ ಗಾಝಿಪುರ ಗಡಿ ಭಾಗಗಳಿಂದ ಸುಮಾರು ಎರಡು ಲಕ್ಷ ಟ್ರ್ಯಾಕ್ಟರ್ಗಳು ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಲಿದೆ ಎಂದು ರೈತ ಸಂಘಟನೆಗಳು ಮಾಹಿತಿ ನೀಡಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.