ನೋಯ್ಡಾ(ಉತ್ತರಪ್ರದೇಶ): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಗುಂಪೊಂದು ಇಲ್ಲಿನಯಮುನಾ ಎಕ್ಸ್ಪ್ರೆಸ್ ವೇನ ಜೆವಾರ್ ಟೋಲ್ ಫ್ಲಾಜಾದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಉತ್ತರ ಪ್ರದೇಶದ ಟೋಲ್ ಪ್ಲಾಜಾಗಳಲ್ಲಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದ್ದ ಭಾರತೀಯ ಕಿಸಾನ್ ಒಕ್ಕೂಟದ(ಬಿಕೆಯು)ಪ್ರತಿನಿಧಿಗಳು ಗೌತಮ್ ಬುದ್ಧನಗರಕ್ಕೆ ಗುರುವಾರ ಬಂದಿದ್ದರು.
‘ಈ ಗುಂಪಿನ ಸ್ಥಳೀಯ ನಾಯಕರು ಸೇರಿದಂತೆ ಕೆಲವರನ್ನು ಮಾತುಕತೆಗೆಂದು ಗುರುವಾರ ರಾತ್ರಿ ಜೆವಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಟೋಲ್ ಪ್ಲಾಜಾದ ಬಳಿ ಪ್ರತಿಭಟನೆ ನಡೆಸದಂತೆ ನಾವು ಅವರಲ್ಲಿ ಮನವಿ ಮಾಡಿದೆವು. ಆದರೆ ಅವರು ಅದಕ್ಕೆ ಸಮ್ಮತಿಸಲಿಲ್ಲ’ ಎಂದು ಜೆವಾರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಉಮೇಶ್ ಸಿಂಗ್ ಅವರು ತಿಳಿಸಿದರು.
ಪ್ರತಿಭಟನಕಾರರು ಪೊಲೀಸ್ ಠಾಣೆಯಿಂದ ಮರಳಿದ ಕೆಲವೇ ಕ್ಷಣಗಳಲ್ಲಿ ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರತಿಭಟನೆಯು ಶುಕ್ರವಾರವೂ ಮುಂದುವರಿದಿದೆ. ಯಮುನಾ ಎಕ್ಸ್ಪ್ರೆಸ್ ವೇನ ಎರಡು ಲೇನ್ಗಳಲ್ಲಿ ಮಾತ್ರ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಜೆವಾರ್ ಟೋಲ್ ಪ್ಲಾಜಾದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಗುರುವಾರದಿಂದ ಪ್ರತಿಭಟನೆ ತೀವ್ರಗೊಂಡಿದ್ದು, ರಾಜ್ಯದ ಐದು ಟೋಲ್ ಪ್ಲಾಜಾಗಳಾದ ಗೌತಮ್ ಬುದ್ಧನಗರ, ಮೀರತ್, ಅಮ್ರೊಹಾ, ಮೊರಾದಾಬಾದ್, ಮುಜಾಫರ್ನಗರದಲ್ಲಿ ಬಿಕೆಯು ಸದಸ್ಯರು ಪ್ರತಿಭಟಿಸುತ್ತಿದ್ದಾರೆ. ಈ ಬಗ್ಗೆ ಬಿಕೆಯುನ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಮಾಹಿತಿ ನೀಡಿದ್ದಾರೆ.