ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು, ಮೇ ತಿಂಗಳಲ್ಲಿ ಸಂಸತ್ತಿಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆಗೆಕರೆ ನೀಡಿವೆ.
ಮೇ ತಿಂಗಳ ಮೊದಲ ಹದಿನೈದು ದಿನದೊಳಗೆ ಸಂಸತ್ತಿಗೆ ಮಾರ್ಚ್ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಘೋಷಿಸಿದೆ.
ರೈತರು ಕಾರ್ಮಿಕರ ಹೊರತಾಗಿ ಮಹಿಳೆಯರು, ದಲಿತ-ಆದಿವಾಸಿ-ಬಹುಜನ, ನಿರೋದ್ಯೋಗಿ ಯುವ ಜನತೆ ಮತ್ತು ಸಮಾಜದ ಪ್ರತಿಯೊಂದು ವರ್ಗದವರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಸಂಸತ್ ಮಾರ್ಚ್ ಸಂಪೂರ್ಣ ಶಾಂತಿಯುತವಾಗಿ ನಡೆಯಲಿದೆ ಎಂದು ಎಸ್ಕೆಎಂ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಜನರು ತಮ್ಮ ಹಳ್ಳಿಗಳಿಂದ ದೆಹಲಿಯ ಗಡಿಗೆ ವಾಹನಗಳಲ್ಲಿ ಬರುತ್ತಾರೆ. ನಂತರ ದೆಹಲಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ 'ಸಂಸತ್ ಮಾರ್ಚ್'ನ ನಿಖರ ದಿನಾಂಕ ಘೋಷಿಸಲಾಗುವುದು ಎಂದು ಹೇಳಿದೆ.
'ಸಂವಿಧಾನ ರಕ್ಷಿಸಿ'... ಅದೇ ಹೊತ್ತಿಗೆ ಏಪ್ರಿಲ್ 14ರಂದು ಡಾ. ಅಂಬೇಡ್ಕರ್ ಜನ್ಮ ದಿನಾಚರಣೆಯಂದು 'ಸಂವಿಧಾನ್ ಬಚಾವೋ' (ಸಂವಿಧಾನ ರಕ್ಷಿಸಿ) ಅಂದೋಲನಕ್ಕೆ ರೈತ ಸಂಘಟನೆ ಕರೆ ನೀಡಿದೆ. ಇದಕ್ಕೂ ಮೊದಲು ಏಪ್ರಿಲ್ 10ರಂದು ಕೆಎಂಪಿ ಎಕ್ಸ್ಪ್ರೆಸ್ವೇ ತಡೆಯೊಡ್ಡಲು ನಿರ್ಧರಿಸಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಮಾರ್ಚ್ 26ರಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ಗೆ ಕರೆ ನೀಡಿತ್ತು.