ನವದೆಹಲಿ: ‘ವಿದೇಶಿ ದೇಣಿಗೆ ಪಡೆಯುವಲ್ಲಿ ನಿಯಮಗಳ ಉಲ್ಲಂಘನೆಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ಎನ್ಜಿಒ ಪ್ರತಿನಿಧಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಸಿಬಿಐ ದೇಶದಾದ್ಯಂತ ಕಾರ್ಯಾಚರಣೆ ಕೈಗೊಂಡಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
‘ದೆಹಲಿ, ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಮೈಸೂರು ಮತ್ತು ರಾಜಸ್ಥಾನದ ಕೆಲವು ಸ್ಥಳಗಳು ಸೇರಿದಂತೆ ಸುಮಾರು 40 ಸ್ಥಳಗಳಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆಗಳ ಕುರಿತು ಸಂಘಟಿತ ಕಾರ್ಯಾಚರಣೆ ನಡೆಯುತ್ತಿದೆ’ ಎಂದೂ ಅವರು ಹೇಳಿದ್ದಾರೆ.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮತ್ತು ಎನ್ಜಿಒ ಪ್ರತಿನಿಧಿಗಳು ಸೇರಿದಂತೆ ಆರು ಜನರನ್ನು ಸಿಬಿಐ ಬಂಧಿಸಿದೆ. ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ ₹ 2 ಕೋಟಿ ಮೌಲ್ಯದ ಹವಾಲಾ ವಹಿವಾಟು ಕೂಡ ಬಹಿರಂಗವಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.