ಲಖನೌ: ‘ರಾಮಚರಿತ ಮಾನಸ’ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೌರ್ಯ ಅವರ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಉತ್ತರ ಪ್ರದೇಶದ ಬಜಾರ್ ಖಾಲಾದ ನಿವಾಸಿ ಶಿವೇಂದ್ರ ಮಿಶ್ರಾ ದೂರು ನೀಡಿದ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದೇ ವೇಳೆ, ರಾಜಧಾನಿಯಲ್ಲಿರುವ ಮಲಗಿರುವ ಭಂಗಿಯ ಲೆಟ್ಟೆ ಹನುಮಾನ್ ದೇವಾಲಯಕ್ಕೆ ಮೌರ್ಯ ಅವರ ಪ್ರವೇಶವನ್ನು ನಿಷೇಧಿಸಲಾಗಿದೆ. ‘ಅಧರ್ಮಿ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ದೇವಾಲಯದ ಪ್ರವೇಶ ವರ್ಜಿತವಾಗಿದೆ‘ ಎಂದು ದೇವಾಲಯದ ಹೊರಭಾಗದಲ್ಲಿ ಬ್ಯಾನರ್ ಕೂಡ ಹಾಕಲಾಗಿದೆ.