ನವದೆಹಲಿ: ಚಂಡಮಾರುತ, ಪ್ರವಾಹ, ಭೂಕಂಪನ ಅಥವಾ ಸಿಡಿಲಿನಂತಹ ನೈಸರ್ಗಿಕ ಪ್ರಕೋಪಗಳಿಂದಾಗಿ ಸಂಭವಿಸದ ಹೊರತು ಅಗ್ನಿ ಅವಘಡವನ್ನು ‘ದೇವರ ಆಟ’ ಎಂದು ಕರೆಯಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವೀಲ್ಕರ್, ದಿನೇಶ್ ಮಾಹೇಶ್ವರಿ ಹಾಗೂ ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಅರ್ಜಿಯೊಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಮದ್ಯ ತಯಾರಿಸುವ ಕಂಪನಿಯೊಂದರ ಉಗ್ರಾಣದಲ್ಲಿ ಸಂಭವಿಸಿದ ಅಗ್ನಿ ಅವಘಡವನ್ನು ‘ದೇವರ ಆಟ’ ಎಂದು ಕರೆದಿದ್ದ ಅಲಹಾಬಾದ್ ಹೈಕೋರ್ಟ್, ತೆರಿಗೆ ಭರಿಸುವುದರಿಂದ ಕಂಪನಿಗೆ ವಿನಾಯಿತಿ ನೀಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶದ ಅಬಕಾರಿ ಇಲಾಖೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಹೈಕೋರ್ಟ್ನ ಈ ಆದೇಶವನ್ನು ರದ್ದು ಮಾಡಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಚಂಡಮಾರುತ, ಪ್ರವಾಹ, ಸಿಡಿಲು ಅಥವಾ ಭೂಕಂಪನದಂತಹ ಪ್ರಕೃತಿ ವಿಕೋಪದಿಂದಾಗಿ ಅಗ್ನಿ ದುರಂತ ಸಂಭವಿಸಿಲ್ಲ ಎಂದು ಅಭಿಪ್ರಾಯಪಟ್ಟಿತು.
‘ಯಾವುದೇ ವ್ಯಕ್ತಿಯ ಕಿಡಿಗೇಡಿತನದಿಂದಾಗಿಯೂ ಉಗ್ರಾಣದಲ್ಲಿ ಅಗ್ನಿ ದುರಂತ ಸಂಭವಿಸಿಲ್ಲ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.