ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೋವಿಡ್ ಪರಿಸ್ಥಿತಿ ಕುರಿತು ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಆರೋಗ್ಯ ತಜ್ಞರ ಜೊತೆ ಗುರುವಾರ ಪರಿಶೀಲನಾ ಸಭೆ ನಡೆಸಿತು.
ಈ ವೇಳೆ, ಮತದಾನದ ವೇಳೆ ತೆಗೆದುಕೊಳ್ಳಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಚುನಾವಣಾ ಆಯೋಗ ಮಾಹಿತಿ ಪಡೆದಿದೆ. ಜೊತೆಗೆ, ಚುನಾವಣೆ ನಡೆಯುವ ಐದೂ ರಾಜ್ಯಗಳಲ್ಲಿ ಅರ್ಹರಿಗೆ ಲಸಿಕೆ ನೀಡಬೇಕಿರುವ ಅಗತ್ಯದ ಕುರಿತು ಒತ್ತಿ ಹೇಳಿದೆ.
ಈ ಸಭೆಯಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ಜೊತೆ ಏಮ್ಸ್ ನಿರ್ದೇಶಕರಾದ ರಣದೀಪ್ ಗುಲೇರಿಯ ಮತ್ತು ಐಸಿಎಂಆರ್ ಮಹಾ ನಿರ್ದೇಶಕ ಬಲರಾಮ್ ಭಾರ್ಗವ ಅವರೂ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಪರಿಸ್ಥಿತಿ ಕುರಿತು ಚುನಾವಣಾ ಆಯೋಗ ಸಂಪೂರ್ಣ ಪರಿಶೀಲನೆ ನಡೆಸಿದೆ. ಚುನಾವಣಾ ಪ್ರಚಾರ ಮತ್ತು ಮತದಾನದ ವೇಳೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಆರೋಗ್ಯ ಕ್ಷೇತ್ರದ ತಜ್ಞರಿಂದಲೂ ಸಲಹೆಗಳನ್ನು ಆಯೋಗವು ಪಡೆದಿದೆ ಎಂದು ಹೇಳಲಾಗಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ಜೊತೆ ಚರ್ಚೆ ಪ್ರತ್ಯೇಕ ಸಭೆ ನಡೆಸಿದ ಆಯೋಗವು, ಚುನಾವಣೆ ನಡೆಯಲಿರುವ ಐದೂ ರಾಜ್ಯಗಳಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಮಾಹಿತಿ ಪಡೆಯಿತು.
ಚುನಾವಣೆ ನಡೆಯಲಿರುವ ಐದೂ ರಾಜ್ಯಗಳಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವಂತೆ ಡಿ.27ರಂದು ನಡೆದ ಸಭೆಯಲ್ಲಿ ಚುನಾವಣಾ ಆಯೋಗವು ರಾಜೇಶ್ ಭೂಷಣ್ ಅವರಿಗೆ ಹೇಳಿತ್ತು.