ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಕು ಬೇಡ, ಒಮ್ಮತ ಬೇಕು: ಜಿ 20 ರಾಷ್ಟ್ರಗಳಿಗೆ ಮೋದಿ ಕರೆ

Last Updated 2 ಮಾರ್ಚ್ 2023, 16:19 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಸವಾಲುಗಳನ್ನು ಎದುರಿಸಲು ಜಿ 20 ರಾಷ್ಟ್ರಗಳು ಒಮ್ಮತಕ್ಕೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ.

ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಜಿ 20 ರಾಷ್ಟ್ರಗಳ ನಡುವೆ ಮೂಡಿರುವ ಒಡಕಿನ ಮಧ್ಯೆ ಮೋದಿ ಅವರಿಂದ ಈ ಹೇಳಿಕೆ ಬಂದಿತು.

ಜಿ 20 ವಿದೇಶಾಂಗ ಸಚಿವರ ಸಭೆ ಉದ್ದೇಶಿಸಿ ವಿಡಿಯೊ ಸಂದೇಶ ನೀಡಿರುವ ಅವರು, ಒಟ್ಟಾರೆ ಸಹಕಾರದ ಮೇಲೆ ಪರಿಣಾಮ ಬೀರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮೇಲಿನ ಭಿನ್ನಾಭಿಪ್ರಾಯಗಳಿಗೆ ಜಿ 20 ಅವಕಾಶ ನೀಡಬಾರದು’ ಎಂದರು.

‘ಅಭಿವೃದ್ಧಿ, ಆರ್ಥಿಕ ಸ್ಥಿರತೆ, ವಿಪತ್ತು ನಿರ್ವಹಣೆ, ಆಹಾರ ಮತ್ತು ಇಂಧನ ಭದ್ರತೆ ಸಾಧಿಸಲು ಹಾಗೂ ಭಯೋತ್ಪಾದನೆ, ದೇಶೀಯ ಅಪರಾಧ, ಭ್ರಷ್ಟಾಚಾರ ಹತ್ತಿಕ್ಕಲು ಜಗತ್ತು ಜಿ 20 ಕಡೆಗೆ ನೋಡುತ್ತಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಒಮ್ಮತ ಮೂಡಿಸುವ ಮತ್ತು ದೃಢ ಫಲಿತಾಂಶ ನೀಡುವ ಸಾಮರ್ಥ್ಯ ಜಿ 20 ಹೊಂದಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಬಹುಪಕ್ಷೀಯತೆ ಇಂದು ಬಿಕ್ಕಟ್ಟಿನಲ್ಲಿದೆ. ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಯುದ್ಧದ ವಿಷಯಗಳಲ್ಲಿ ಜಾಗತಿಕ ಆಡಳಿತವು ವಿಫಲವಾಗಿರುವುದು ಸ್ಪಷ್ಟ. ಈ ವೈಫಲ್ಯದ ದುರಂತ ಪರಿಣಾಮಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವುದನ್ನು ನಾವು ಒಪ್ಪಿಕೊಳ್ಳಬೇಕು. ವರ್ಷಗಳ ಪ್ರಗತಿಯ ನಂತರ, ನಾವು ಇಂದು ಸುಸ್ಥಿರ ಅಭಿವೃದ್ಧಿ ಗುರಿಗಳಿಂದ ಹಿಮ್ಮುಖ ಚಲನೆಯ ಅಪಾಯದಲ್ಲಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.

ಉಕ್ರೇನ್ ಸಂಘರ್ಷ ಅಥವಾ ಇತರ ಯಾವುದೇ ವಿವಾದಾತ್ಮಕ ವಿಷಯಗಳನ್ನು ಉಲ್ಲೇಖಿಸದೇ, ‘ಪರಿಹರಿಸಬಹುದಾದ ಬಿಕ್ಕಟ್ಟುಗಳು ಎಷ್ಟೇ ಕಠಿಣವಿದ್ದರೂ ಅವುಗಳನ್ನು ಬಗೆಹರಿಸುವ ಅವಕಾಶವನ್ನು ಜಿ 20 ಕೈಚೆಲ್ಲಬಾರದು. ವಿಭಜನೆ ಬಿಟ್ಟು, ಒಗ್ಗಟ್ಟಿನ ಕಡೆಗೆ ಗಮನ ಕೇಂದ್ರೀಕರಿಸಬೇಕಿದೆ’ ಎಂದು ಮೋದಿ ಹೇಳಿದ್ದಾರೆ.

ಗಾಂಧಿ ಮತ್ತು ಬುದ್ಧನನ್ನು ಸ್ಮರಿಸಿದ ಮೋದಿ, ‘ಭಾರತದ ನಾಗರಿಕತೆಯ ಮೌಲ್ಯಗಳಿಂದ ಪ್ರೇರಣೆ ಪಡೆದುಕೊಳ್ಳಿ. ನಿಮ್ಮೆಲ್ಲರ ಸಾಮೂಹಿಕ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಸಮತೋಲನದ ಅಭಿವೃದ್ಧಿ ಸಾಧಿಸಬಹುದು, ಜಾಗತಿಕ ಸವಾಲುಗಳನ್ನು ಮೆಟ್ಟಿನಿಲ್ಲಬಹುದು’ ಎಂದು ಅವರು ಹೇಳಿದ್ದಾರೆ.

ಮೂಡದ ಒಮ್ಮತ

ನವದೆಹಲಿ: ವಿಶ್ವದ ದೊಡ್ಡ ಆರ್ಥಿಕತೆಯ ರಾಷ್ಟ್ರಗಳ ನಡುವೆ ಒಮ್ಮತ ಮೂಡಿಸಲು ಭಾರತದ ನಿರಂತರ ಪ್ರಯತ್ನದ ಹೊರತಾಗಿಯೂ ಉಕ್ರೇನ್ ಸಂಘರ್ಷದ ಬಗೆಗಿನ ತೀವ್ರ ಭಿನ್ನಾಭಿಪ್ರಾಯಗಳಿಂದಾಗಿ ಜಿ 20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯು ಜಂಟಿ ಘೋಷಣೆಗೆ ಒಪ್ಪಲು ಗುರವಾರ ವಿಫಲವಾಯಿತು.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯ ಸಾರಾಂಶ ಮತ್ತು ಫಲಿತಾಂಶದ ವಿವರಗಳನ್ನು ಮಾಧ್ಯಮ ಗೋಷ್ಠಿಯಲ್ಲಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್‌, ಇವು, ಜಾಗತಿಕ ಸವಾಲುಗಳನ್ನು ಎದುರಿಸುವ ಜಿ 20 ರಾಷ್ಟ್ರಗಳ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದರು.

ವಿದೇಶಾಂಗ ಸಚಿವರ ಸಭೆಯು ಭಯೋತ್ಪಾದನೆಯನ್ನು ನಿಸ್ಸಂದಿಗ್ಧವಾಗಿ ಖಂಡಿಸಿದೆ ಎಂದೂ ಅವರು ಹೇಳಿದರು.

ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಉಳಿದಿವೆ. ಅಮೆರಿಕ ನೇತೃತ್ವದ ಪಶ್ಚಿಮದ ರಾಷ್ಟ್ರಗಳು ಮತ್ತು ರಷ್ಯಾ-ಚೀನಾ ನಡುವೆ ಉಕ್ರೇನ್ ಸಂಘರ್ಷದ ವಿಚಾರದಲ್ಲಿ ಆಳವಾದ ಒಡಕುಗಳು ಇರುವುದಾಗಿ ಹಲವು ದೇಶಗಳ ಉನ್ನತ ರಾಜತಾಂತ್ರಿಕರು ಅಭಿಪ್ರಾಯಪಟ್ಟರು. ಈ ವಿಷಯದ ಬಗ್ಗೆ ಧ್ರುವೀಕೃತ ದೃಷ್ಟಿಕೋನಗಳು ಇವೆ. ಒಪ್ಪಂದಗಳಿರುವಲ್ಲಿ ಹೆಚ್ಚಿನ ಸಂಖ್ಯೆಯ ಸಮಸ್ಯೆಗಳೂ ಇರುತ್ತವೆ ಎಂದು ಜೈಶಂಕರ್ ಹೇಳಿದರು.

ಸಭೆಯಲ್ಲಿ ಹೊರಹೊಮ್ಮಿದ ಫಲಿತಾಂಶ ಮತ್ತು ಸಾರಾಂಶದ ದಾಖಲೆಯಲ್ಲಿ ಉಕ್ರೇನ್ ಸಂಘರ್ಷದ ಕುರಿತು ಜಿ 20 ಬಾಲಿ ಘೋಷಣೆಯ ಎರಡು ಪ್ಯಾರಾಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಅಡಿ ಟಿಪ್ಪಣಿಯಲ್ಲಿ ರಷ್ಯಾ ಮತ್ತು ಚೀನಾ ಹೊರತುಪಡಿಸಿ ಎಲ್ಲ ದೇಶಗಳು ಬಾಲಿ ಘೋಷಣೆಯ ಎರಡು ಪ್ಯಾರಾಗಳ ಸಾರಂಶ ಒಪ್ಪಿವೆ ಎಂದು ಅವರು ಹೇಳಿದ್ದಾರೆ.

ಜಿ 20 ಬಾಲಿ ಘೋಷಣೆಯ ಎರಡು ಪ್ಯಾರಾಗಳ ಪ್ರಕಾರ ‘ಶಾಂತಿ ಮತ್ತು ಸ್ಥಿರತೆ ಕಾಪಾಡುವ ಅಂತರರಾಷ್ಟ್ರೀಯ ಕಾನೂನು ಮತ್ತು ಬಹುಪಕ್ಷೀಯ ವ್ಯವಸ್ಥೆ ಎತ್ತಿಹಿಡಿಯುವುದು ಅತ್ಯಗತ್ಯ. ಇದು ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಪ್ರತಿಪಾದಿಸಲಾದ ಎಲ್ಲ ಉದ್ದೇಶಗಳು ಮತ್ತು ತತ್ವಗಳನ್ನು ರಕ್ಷಿಸುವುದಾಗಿದೆ. ಸಶಸ್ತ್ರ ಸಂಘರ್ಷಗಳಲ್ಲಿ ನಾಗರಿಕರ ಪ್ರಾಣ ಮತ್ತು ಮೂಲಸೌಕರ್ಯ ರಕ್ಷಣೆ ಸೇರಿ ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿರಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT