ಮಂದಸೌರ್(ಮಧ್ಯ ಪ್ರದೇಶ): ಮಧ್ಯ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮಂದಸೌರ್ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬ ಐದು ವರ್ಷಗಳ ಹಿಂದೆ ಹಿಂದೂ ಯುವತಿಯನ್ನು ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈಗ ಪತ್ನಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ವೃತ್ತಿಯಲ್ಲಿ ಚಾಲಕರಾಗಿರುವ ಮಂದಸೌರ್ನ ಕಚನಾರಾ ಗ್ರಾಮದ ನಿವಾಸಿ ಅಫ್ಸರ್ ಮನ್ಸೂರಿ ಮತಾಂತರಗೊಂಡಿದ್ದು, ತನ್ನ ಹೆಸರನ್ನು 'ಕೃಷ್ಣ ಸನಾತನಿ' ಎಂದು ಬದಲಾಯಿಸಿಕೊಂಡಿದ್ದಾರೆ.
ಮನ್ಸೂರಿ, ರಾಧಾರನ್ನು ಮದುವೆಯಾದ ನಂತರ, ತನ್ನ ಕುಟುಂಬದಿಂದ ದೂರವಿದ್ದರು. ಮಂಗಳವಾರದಂದು ಉಪವಾಸವನ್ನು ಆಚರಿಸುವುದು ಸೇರಿದಂತೆ ಹೆಚ್ಚಿನ ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದ ಅವರು ಅಂತಿಮವಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ್ದರು.
'ಗಾಯತ್ರಿ ಪರಿವಾರ'ದ ಪಂಡಿತ್ ನರೇಶ್ ತ್ರಿವೇದಿ ಅವರು ಮನ್ಸೂರಿಗೆ ಹಸುವಿನ ಸಗಣಿ, ಗೋಮೂತ್ರ, ಮೊಸರು, ಹಾಲು ಮತ್ತು ಜೇನುತುಪ್ಪದಿಂದ ಸ್ನಾನ, ಮಂತ್ರ ಪಠಣ ಮುಂತಾದ ಪ್ರಕ್ರಿಯೆಗಳನ್ನು ನಡೆಸಿದರು.
ರಾಜಸ್ಥಾನದ ಉದಯಪುರದಲ್ಲಿ ರೋಗಿಗಳನ್ನು ವೈದ್ಯಕೀಯ ಶಿಬಿರಗಳಿಗೆ ಕರೆದೊಯ್ಯುತ್ತಿದ್ದಾಗ ಅಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ರಾಧಾಳನ್ನು ಭೇಟಿಯಾಗಿದ್ದಾಗಿ ಅವರು ಹೇಳಿದ್ದಾರೆ. ಪರಸ್ಪರ ಪರಿಚಯಬೆಳೆದು ಪ್ರೀತಿಸಿ, ವಿವಾಹವಾಗಿದ್ದಾಗಿ ಕೃಷ್ಣ ಸನಾತನಿ ಹೇಳಿದ್ದಾರೆ.