ಚೆನ್ನೈ: ಭಾರತದಲ್ಲಿ ತಯಾರಿಕೆ ನಿಲ್ಲಿಸುವ ಫೋರ್ಡ್ ಇಂಡಿಯಾ ಕಂಪನಿಯ ನಿರ್ಧಾರ ವಿರೋಧಿಸಿ ಚೆನ್ನೈನಲ್ಲಿ ಇರುವ ಕಂಪನಿಯ ಘಟಕದ ಬಳಿ ಉದ್ಯೋಗಿಗಳ ಒಂದು ಗುಂಪು ಮಂಗಳವಾರ ಪ್ರತಿಭಟನೆ ನಡೆಸಿದ್ದು, ತಮಿಳುನಾಡು ಸರ್ಕಾರದ ಮಧ್ಯಪ್ರವೇಶಕ್ಕೆ ಬೇಡಿಕೆ ಇಟ್ಟಿದೆ.
ಕಂಪನಿಯ ನಿರ್ಧಾರವು ಆಘಾತ ಉಂಟುಮಾಡಿದೆ ಎಂದು ಚೆನ್ನೈ ಫೋರ್ಡ್ ಉದ್ಯೋಗಿಗಳ ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ. 2,700 ಉದ್ಯೋಗಿಗಳ ಜೀವನೋಪಾಯಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಆಡಳಿತವು ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೈಗಾರಿಕಾ ಸಚಿವ ತಂಗಂ ತೆನ್ನರಸು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸಭೆ ನಡೆಸಿರುವ ವರದಿಯಾಗಿದೆ.
ಕಂಪನಿ ವಹಿವಾಟಿನ ಪುನರ್ ರಚನೆಯಿಂದ ಉದ್ಯೋಗಿಗಳ ಮೇಲೆ ಆಗಲಿರುವ ಪರಿಣಾಮವನ್ನು ನಿಭಾಯಿಸಲು ಉದ್ಯೋಗಿಗಳು ಮತ್ತು ಒಕ್ಕೂಟದೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧವಾಗಿರುವುದಾಗಿ ಫೋರ್ಡ್ ಇಂಡಿಯಾ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.