ಹೈದರಾಬಾದ್: ನಾಲೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಎಂಜಿನಿಯರ್ ಹಾಗೂ ಕಾರ್ಮಿಕರನ್ನು ಬಂದೂಕು ತೋರಿಸಿ ಬೆದರಿಸಿದ ಆರೋಪದಡಿಯಲ್ಲಿ ಆಂಧ್ರಪ್ರದೇಶದ ಮಾಜಿ ಸಚಿವ ಜಿ.ಮೋಹನ್ ರೆಡ್ಡಿ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್ ಹೌಸ್ಗೆ ಸೈಟ್ ಎಂಜಿನಿಯರ್ ಹಾಗೂ ಕಾರ್ಮಿಕರನ್ನು ಕರೆದೊಯ್ದ ರೆಡ್ಡಿ, ಪರವಾನಗಿ ಹೊಂದಿರುವ ಬಂದೂಕು ತೋರಿಸಿ, ನಾಲೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಬೆದರಿಕೆ ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ತೆಲಂಗಾಣ ಸರ್ಕಾರವು ರೆಡ್ಡಿ ಅವರ ಒಡೆತನದ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಅವರಿಗೆ ಪರಿಹಾರವನ್ನೂ ನೀಡಿದೆ. ಹೀಗಿದ್ದರೂ ಅವರು ಕಾಮಗಾರಿ ಸ್ಥಗಿತಗೊಳಿಸುವಂತೆ ಹೇಳಿ ಎಂಜಿನಿಯರ್ ಹಾಗೂ ಕಾರ್ಮಿಕರಿಗೆ ಬೆದರಿಕೆ ಒಡ್ಡಿದ್ದಾರೆ. ಐಪಿಸಿ ಸೆಕ್ಷನ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ಬಂದೂಕನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ನಲಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ರಂಗನಾಥ್ ತಿಳಿಸಿದ್ದಾರೆ.