ಮೀರಠ್: ರಾಷ್ಟ್ರೀಯ ಲೋಕ ದಳದ (ಆರ್ಎಲ್ಡಿ) ಹಿರಿಯ ನಾಯಕ ಚೌಧರಿ ಯಶ್ವೀರ್ ಸಿಂಗ್ ಮತ್ತು ಪಕ್ಷದ ಇತರ ಸದಸ್ಯರು ಭಾನುವಾರ ಇಲ್ಲಿ ಬಿಜೆಪಿಗೆ ಸೇರ್ಪಡೆ ಆದರು.
ಆರ್ಎಲ್ಡಿಯ ಮಾಜಿ ಪ್ರಾದೇಶಿಕ ಮುಖ್ಯಸ್ಥ ಯಶ್ವೀರ್ ಸಿಂಗ್ ಅವರು ಪಕ್ಷದ ಮಾಜಿ ಶಾಸಕ ಸುದೇಶ್ ಶರ್ಮ ಮತ್ತು ಸ್ಥಳೀಯ ಮುಖಂಡರ ಜೊತೆ ಬಿಜೆಪಿ ಸೇರಿದರು. ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಭೂಪಿಂದರ್ ಸಿಂಗ್ ಚೌಧರಿ ಅವರು ಇವರನ್ನೆಲ್ಲಾ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದಭೂಪಿಂದರ್ ಸಿಂಗ್, ಹೊಸದಾಗಿ ಬಿಜೆಪಿ ಸೇರಿರುವವರು ಪಕ್ಷವನ್ನು ಬಲಪಡಿಸಲಿದ್ದಾರೆ. ಖತೌಲಿ ಕ್ಷೇತ್ರಕ್ಕೆ ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದ ಗೆಲುವು ದಾಖಲಿಸಲಿದೆ ಎಂದರು.
ಹಲವು ಮುಖಂಡರು ಪಕ್ಷ ತೊರೆದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ಎಲ್ಡಿ ಮಾಧ್ಯಮ ಉಸ್ತುವಾರಿ ಸುರೇಂದ್ರ ಶರ್ಮ ಅವರು, ‘ಈಗಿನ ರಾಜಕೀಯ ಸಂದರ್ಭದಲ್ಲಿ ಸವಾಲುಗಳನ್ನು ಎದುರಿಸುವ ಧೈರ್ಯ ಇಲ್ಲದವರು ಬಿಜೆಪಿ ಸೇರುತ್ತಿದ್ದಾರೆ’ ಎಂದು ಹೇಳಿದರು.