ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಅಲೆಮಾರಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಉತ್ತರ ಕಾಶ್ಮೀರ ಜಿಲ್ಲೆಯ ಸೋಪೋರ್ ಪ್ರದೇಶದ ಹಮಾಮ್ ಮಾರ್ಕೂಟ್ನಲ್ಲಿರುವ ಡಂಗಿವಾಚಾದ ಮೇಲಿನ ಭಾಗದಲ್ಲಿ ಶನಿವಾರ ರಾತ್ರಿ ಮೇಘಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡಗಳು ಸ್ಥಳಕ್ಕೆ ಧಾವಿಸಿದ್ದು, ನಾಲ್ವರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೊಹಮ್ಮದ್ ತಾರಿಕ್ ಖಾರಿ (8), ಶಹನಾಜ ಬೇಗಂ (30), ನಾಜಿಯಾ ಅಕ್ತರ್ (14) ಮತ್ತು ಅರಿಫ್ ಹುಸೇನ್ ಖಾರಿ (5) ಎಂಬುವವರು ಮೃತಪಟ್ಟಿದ್ದು, ಇವರೆಲ್ಲರೂ ಜಮ್ಮು ಪ್ರದೇಶದ ರಾಜೌರಿಯ ಕಲ್ಸಿಯಾನ್ ನೌಶೇರಾ ಪ್ರದೇಶದವರು.
ಕುಟುಂಬದ ಮತ್ತೊಬ್ಬ ಸದಸ್ಯ ಮೊಹಮ್ಮದ್ ಬಶೀರ್ ಖಾರಿ (80) ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.