ನವದೆಹಲಿ: ಭಾರತವು ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳು ಸೇರಿದಂತೆ ದೇಶದ 100 ಸ್ಮಾರಕಗಳಿಗೆ ಒಂದು ವಾರ ಜಿ–20 ಲಾಂಛನ ಒಳಗೊಂಡಂತೆ ದೀಪಾಲಂಕಾರ ಮಾಡಲು ಮುಂದಾಗಿದ್ದು, ಮೋದಿ ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ಟೀಕಿಸಿದೆ.
‘ಜಿ–20 ಅಧ್ಯಕ್ಷತೆಯು ಸರದಿಯ ಪ್ರಕಾರ ಎಲ್ಲಾ ರಾಷ್ಟ್ರಗಳಿಗೂ ಸಿಗುತ್ತದೆ. ಅದು ಸ್ವಾಭಾವಿಕಪ್ರಕ್ರಿಯೆ. ಈ ವಿಚಾರದಲ್ಲಿ ಮೋದಿ ಸರ್ಕಾರ ದೊಡ್ಡ ನಾಟಕ ಶುರುಮಾಡಿದೆ. ಅಧ್ಯಕ್ಷತೆಯ ನೆಪದಲ್ಲಿ ತನಗೆ ಬೇಕಾದ್ದನ್ನೆಲ್ಲಾ ಮಾಡುತ್ತಿದೆ. ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್ ಹೀಗೆ ಹಲವು ದೇಶಗಳು ಈ ಹಿಂದೆ ಅಧ್ಯಕ್ಷತೆ ವಹಿಸಿದ್ದವು. ಆದರೆ ಅವು ಈ ರೀತಿ ನಾಟಕ ಮಾಡಿರಲಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
‘2014ರ ಏಪ್ರಿಲ್ 5ರಂದು ಗಾಂಧಿನಗರದಲ್ಲಿ ಮಾತನಾಡಿದ್ದ ಎಲ್.ಕೆ.ಅಡ್ವಾಣಿ ಅವರು ಮೋದಿ ಅವರನ್ನು ಅದ್ಭುತ ಈವೆಂಟ್ ಮ್ಯಾನೇಜರ್ ಎಂದು ಕರೆದಿದ್ದರು. ಆ ಮಾತು ಈಗ ನೆನಪಾಗುತ್ತಿದೆ’ ಎಂದು ಕುಟುಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.