ಹೈದರಾಬಾದ್/ನವದೆಹಲಿ: 17 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶನಿವಾರ ಇಬ್ಬರು ಬಾಲಾರೋಪಿಗಳನ್ನು ವಶಕ್ಕೆ ಪಡೆಯಲಾಗಿದೆಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಆರೋಪಿಗಳನ್ನು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಸಾದುದ್ದಿನ್ ಮಲ್ಲಿಕ್ (18) ಎಂಬಾತನನ್ನು ಶುಕ್ರವಾರವೇ ಬಂಧಿಸಲಾಗಿದೆ.ವಶಕ್ಕೆ ಪಡೆದಿರುವ ಇಬ್ಬರು ಬಾಲಾರೋಪಿಗಳನ್ನು ಬಾಲಾಪರಾಧಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳ ಸಂಬಂಧಿಗಳ ಕೈವಾಡವಿದೆ ಎಂಬ ಆರೋಪಗಳ ನಡುವೆ, ಬಿಜೆಪಿ ಮತ್ತು ಕಾಂಗ್ರೆಸ್ ಸಿಬಿಐ ತನಿಖೆಗೆ ಒತ್ತಾಯಿಸಿವೆ.
ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಮಿತ್ರ ಪಕ್ಷ ಎಐಎಂಐಎಂಗೆ ಸೇರಿದ ಪ್ರಭಾವಿ ರಾಜಕಾರಣಿಗಳ ಸಂಬಂಧಿಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್, ಮುಖ್ಯಮಂತ್ರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ವಿರೋಧ ಪಕ್ಷಗಳು ಮತ್ತು ಮಹಿಳಾ ಹಕ್ಕುಗಳ ಸಂಘಟನೆಗಳೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿವೆ.
ಹೈದರಾಬಾದ್ ನಗರದ ಜುಬಿಲಿ ಹಿಲ್ನ ಪಬ್ನಲ್ಲಿ ಪಾರ್ಟಿ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು, ಮೂವರು ಬಾಲಕರು ಸೇರಿ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಟಿಆರ್ಎಸ್ ಪಕ್ಷದ ಮುಖಂಡರ ಪುತ್ರನ ಬಂಧನ:
ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರು ಬಾಲಾರೋಪಿಗಳಲ್ಲಿ ಒಬ್ಬಾತ, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖಂಡರೊಬ್ಬರ ಪುತ್ರ ಎಂದು ‘ಎನ್ಡಿ ಟಿವಿ’ ವರದಿ ಮಾಡಿದೆ.
‘ರಾಜ್ಯದ ಗೃಹ ಸಚಿವರ ಮೊಮ್ಮಗಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನುವ ಆರೋಪ ಸುಳ್ಳು’ ಎಂದು ಹಿರಿಯ ಪೊಲೀಸ್ ಅಧಿಕಾರಿ ಜೋಯಲ್ ಡೇವಿಸ್ ಸ್ಪಷ್ಟಪಡಿಸಿದ್ದಾರೆ.
ವಿವರಣೆ ಕೇಳಿದ ಎನ್ಸಿಪಿಸಿಆರ್ : ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಮೂರು ದಿನ ವಿಳಂಬ ಮಾಡಿರುವುದಕ್ಕೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು (ಎನ್ಸಿಪಿಸಿಆರ್)ನಗರ ಪೊಲೀಸರಿಂದ ವಿವರಣೆ ಕೇಳಿದೆ.
ಅಪ್ರಾಪ್ತ ವಯಸ್ಕರಿಗೆ ಪ್ರವೇಶ ನೀಡಿರುವುದಕ್ಕೆ ಪಬ್ನ ಮಾಲೀಕರ ವಿರುದ್ಧವೂ ಎಫ್ಐಆರ್ ದಾಖಲಿಸಲು ಮತ್ತು ಸಂತ್ರಸ್ತ ಬಾಲಕಿಯ ಗುರುತು ಬಹಿರಂಗಪಡಿಸದಂತೆ ಸೂಚಿಸಿದೆ. ಮೇ 28ರಂದು ಅತ್ಯಾಚಾರಕ್ಕೊಳಗಾಗುವ ಮೊದಲು ಬಾಲಕಿ ಪಬ್ನಲ್ಲಿ ಹಗಲು ಪಾರ್ಟಿಯಲ್ಲಿ ಭಾಗವಹಿಸಿದ್ದಳು.
‘ಎಫ್ಐಆರ್ ದಾಖಲಿಸಲು ಮಾಡಿರುವ ವಿಳಂಬ ಕಳವಳಕಾರಿ ವಿಷಯ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣ ಸಂಬಂಧ ಏಳು ದಿನಗಳೊಳಗೆವಿವರಣೆ ನೀಡಬೇಕು’ ಎಂದು ಆಯೋಗವುಹೈದರಾಬಾದ್ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದೆ.
ಸಾಮೂಹಿಕ ಅತ್ಯಾಚಾರ: ಸಂತ್ರಸ್ತ ಬಾಲಕಿ ಸಾವು
ಚಿತ್ರಕೂಟ(ಪಿಟಿಐ):ಉತ್ತರಪ್ರದೇಶದಪಹಾಡಿ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 13 ವರ್ಷದ ದಲಿತ ಬಾಲಕಿ ಮೃತಪಟ್ಟಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ನದೀಮ್, ಆದರ್ಶ ಪಾಂಡೆ ಮತ್ತು ವಿಪುಲ್ ಮಿಶ್ರಾ ಎಂಬುವವರನ್ನು ಬಂಧಿಸಲಾಗಿದೆ.
ಬಾಲಕಿ ಬುಧವಾರ ರಾತ್ರಿ ತನ್ನ ಕುಟುಂಬದೊಂದಿಗೆ ಮನೆಯ ಹೊರಗಡೆ ಮಲಗಿದ್ದಾಗ ಈ ಕೃತ್ಯ ನಡೆದಿದೆ. ಬಾಲಕಿಯನ್ನು ಪೋಷಕರು ಚಿಕಿತ್ಸೆಗಾಗಿ ಕೌಶಂಬಿ ಜಿಲ್ಲೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ಗುರುವಾರ ರಾತ್ರಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆ ವರದಿಗೆ ಎದುರು ನೋಡಲಾಗುತ್ತಿದೆ ಎಂದುಪೊಲೀಸ್ ವರಿಷ್ಠಾಧಿಕಾರಿ ಅತುಲ್ ಶರ್ಮಾ ತಿಳಿಸಿದ್ದಾರೆ.
‘ಸಂತ್ರಸ್ತ ಬಾಲಕಿ ಎರಡೂ ಕೈಗಳನ್ನು ಕಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದನ್ನು ಮರೆಮಾಚಿರುವ ಬಗ್ಗೆ ಕುಟುಂಬದವರನ್ನೂ ವಿಚಾರಣೆ ನಡೆಸಲಾಗುವುದು’ ಎಂದು ಠಾಣಾಧಿಕಾರಿ ಅಜಿತ್ ಪಾಂಡೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.