ಗಾಂಧಿನಗರ: ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯ ನಡುವಿನ ಅಂತರವು ಕಳೆದ ಎರಡು ದಶಕಗಳಿಂದ ಕ್ಷಿಪ್ರಗತಿಯಲ್ಲಿ ಕಡಿಮೆಯಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದರು.
ಗಾಂಧಿನಗರ ಜಿಲ್ಲೆಯ ಲವದ್ ಹಳ್ಳಿಯಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (ಆರ್ಆರ್ಯು) ಎರಡನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು,ಆಂತರಿಕ ಮತ್ತು ಬಾಹ್ಯ ಭದ್ರತೆಯ ನಡುವಿನ ರೇಖೆಗಳು ಹೈಬ್ರಿಡ್ ಯುದ್ಧದಲ್ಲಿ ಬಹುತೇಕ ಕಣ್ಮರೆಯಾಗುತ್ತವೆ ಎಂದು ಹೇಳಿದರು.
ಸ್ವತಂತ್ರ ಮಾಧ್ಯಮಗಳು, ನ್ಯಾಯಾಂಗ, ಸರ್ಕಾರೇತರ ಸಂಸ್ಥೆಗಳು ಮತ್ತು ಕ್ರಿಯಾತ್ಮಕ ಪ್ರಜಾಪ್ರಭುತ್ವ ದುರುಪಯೋಗದಿಂದ ದೇಶದ ಭದ್ರತೆ ನಾಶವಾಗುವ ಅಪಾಯದ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಭಯೋತ್ಪಾದನೆ, ಸೈಬರ್ ಯುದ್ಧ, ಮಾನವ ಕಳ್ಳಸಾಗಣೆ, ಹಣ ಅಕ್ರಮ ವರ್ಗಾವಣೆ, ಮಾದಕ ದ್ರವ್ಯ ಜಾಲದ ವಿರುದ್ಧ ದೇಶದ ತನಿಖಾ ಸಂಸ್ಥೆಗಳು ಭದ್ರತಾ ಸವಾಲುಗಳಾಗಿ ಪರಿಗಣಿಸಿ ಇವುಗಳ ವಿರುದ್ಧ ಸಮರೋಪಾದಿಯಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದರು.
‘ಭಯೋತ್ಪಾದನೆಯು ಪ್ರತಿ ಆಯಾಮದಲ್ಲೂ ಭಾರಿ ಸವಾಲುಗಳನ್ನು ತಂದೊಡ್ಡಿದೆ. ಇಂದು ಕೇವಲ ಬಾಂಬುಗಳು ಮತ್ತು ಬಂದೂಕುಗಳ ಮಟ್ಟದಲ್ಲಿ ಭಯೋತ್ಪಾದನೆ ನಡೆಯುತ್ತಿಲ್ಲ. ಹೈಬ್ರಿಡ್ ಯುದ್ಧದ ಮೂಲಕಭಯೋತ್ಪಾದನೆ ವಿಸ್ತರಿಸುತ್ತಿದೆ. ಹೈಬ್ರಿಡ್ ಯುದ್ಧದಲ್ಲಿ, ಆಂತರಿಕ ಮತ್ತು ಬಾಹ್ಯ ಭದ್ರತೆಯ ನಡುವಿನ ರೇಖೆ ಬಹುತೇಕ ಕಣ್ಮರೆಯಾಗಲಿದೆ. ಇನ್ನೊಂದೆಡೆ ಫೇಸ್ ಬುಕ್ ಮತ್ತು ವಾಟ್ಸ್ಆ್ಯಪ್ ಮೂಲಕನಕಲಿ ಸುದ್ದಿ ಹಾಗೂ ದ್ವೇಷಪೂರಿತ ವಿಷಯಗಳನ್ನುಸಮಾಜದಲ್ಲಿ ಹರಡುವ‘ಮಾಹಿತಿ ಯುದ್ಧ’ದ ಸಾಧ್ಯತೆಯ ಬಗ್ಗೆಯೂ ನಾವು ಎಚ್ಚರವಾಗಿರಬೇಕು’ ಎಂದರು.