ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾಪಡೆಗಳ ಮುಖ್ಯಸ್ಥರ ಹುದ್ದೆಗೆ ಜ. ನರವಣೆ?

ವಿವಾದರಹಿತವಾಗಿ, ಗಡುವು ಮೀರದೆ ಹೊಸ ನೇಮಕ: ಸರ್ಕಾರದ ನಿರೀಕ್ಷೆ
Last Updated 9 ಡಿಸೆಂಬರ್ 2021, 19:39 IST
ಅಕ್ಷರ ಗಾತ್ರ

ನವದೆಹಲಿ:ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಹುದ್ದೆಗೆ ನೇಮಕ ಪ್ರಕ್ರಿಯೆಯನ್ನು ಸರ್ಕಾರವು ತಕ್ಷಣವೇ ಆರಂಭಿಸಲಿದೆ. ಭೂಸೇನೆಯ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಅವರೇ ಈ ಹುದ್ದೆಗೆ ಏರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಸಿಡಿಎಸ್‌ ಆಗಿದ್ದ ಜ. ಬಿಪಿನ್‌ ರಾವತ್‌ ಅವರು ಹೆಲಿಕಾಪ್ಟರ್‌ ಪತನದಲ್ಲಿ ಮೃತರಾದ ಕಾರಣ ಹುದ್ದೆ ಖಾಲಿ ಆಗಿದೆ.

ನರವಣೆ ಅವರು ಐದು ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಹಾಗಾಗಿ, ಸಿಡಿಎಸ್‌ ಆಗಿ ಅವರನ್ನೇ ನೇಮಿಸುವುದು ಉತ್ತಮ ಎಂದು ಸೇನೆಯ ಹಲವು ನಿವೃತ್ತ ಅಧಿಕಾರಿಗಳು ಹೇಳಿದ್ದಾರೆ.

ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಹಿರಿಯ ಕಮಾಂಡರ್‌ಗಳಿರುವ ಸಮಿತಿಯನ್ನು ಸರ್ಕಾರ ರಚಿಸಲಿದೆ. ಈ ಸಮಿತಿಯು ಮೂರು ದಿನಗಳಲ್ಲಿ ತನ್ನ ಶಿಫಾರಸುಗಳನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಸಲ್ಲಿಸಲಿದೆ. ರಾಜನಾಥ್‌ ಅವರ ಅನುಮೋದನೆ ಬಳಿಕ, ಸಚಿವ ಸಂಪುಟದ ನೇಮಕಾತಿ ಸಮಿತಿಯು ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಮೂರು ಭದ್ರತಾ ಪಡೆಗಳ ನಡುವೆ ಸಮನ್ವಯ ಸಾಧಿಸುವುದು ಸೇರಿದಂತೆ ಜನರಲ್ ಬಿಪಿನ್ ರಾವತ್ ಅವರು ಪೂರ್ಣಗೊಳಿಸದೇ ಬಾಕಿ ಉಳಿಸಿರುವ ಕೆಲಸಗಳನ್ನು ಹೊಸದಾಗಿ ನೇಮಕವಾಗಲಿರುವ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಮುಂದುವರಿಸಬೇಕಿದೆ.

ಪ್ರಸ್ತಾವಿತ ಸೇನಾ ಸುಧಾರಣೆ, ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವ ಪ್ರಕ್ರಿಯೆ ಹಾಗೂ ಯಾವುದೇ ವಿವಾದಕ್ಕೆ ಅವಕಾಶ ಮಾಡಿಕೊಡದಂತೆನೂತನ ಸಿಡಿಎಸ್ ಕೆಲಸ ಮಾಡಬೇಕು ಎಂಬುದು ಸರ್ಕಾರದ ಬಯಕೆಯಾಗಿದೆ.

ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರ ಜೊತೆ ಜನರಲ್ ರಾವತ್ ಅವರು ಕೆಲವ ವಾರಗಳ ಹಿಂದೆ ಸಭೆ ನಡೆಸಿದ್ದರು. ಮೂರು ಪಡೆಗಳಲ್ಲಿ ಆಗಬೇಕಿರುವ ಸುಧಾರಣಾ ಕ್ರಮಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವುದಕ್ಕೆ ಇದ್ದ ಗಡುವನ್ನು 2022ರ ಸೆಪ್ಟೆಂಬರ್‌ನಿಂದ 2022ರ ಏಪ್ರಿಲ್‌ಗೆ ಇಳಿಸಿದ್ದರು.

ಎರಡರಿಂದ ಮೂರು ವರ್ಷಗಳಲ್ಲಿ ಈ ಎಲ್ಲ ಪ್ರಕ್ರಿಯೆಗಳು ಕಾರ್ಯರೂಪಕ್ಕೆ ಬರಲಿವೆ ಎಂದು ರಕ್ಷಣಾ ಸಚಿವಾಲಯ ನಿರೀಕ್ಷೆ ಇಟ್ಟುಕೊಂಡಿದೆ. ಜನರಲ್ ರಾವತ್ ಅವರ ನಿಧನ ಸೇನಾಪಡೆಗಳಲ್ಲಿ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಆದರೆ ಅವರ ಸ್ಥಾನಕ್ಕೆ ಬದಲಿ ಆಯ್ಕೆ ಮಾಡುವ ಮೂಲಕ, ರಾವತ್ ಅವರು ಪ್ರಸ್ತಾಪಿಸಿದ್ದ ಸೇನಾ ಸುಧಾರಣಾ ಪ್ರಕ್ರಿಯೆಯ ಕಾವು ಆರದಂತೆ ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಸೇನಾಪಡೆಗಳ ಮೂಲ ಸಂರಚನೆಯಲ್ಲಿ ಬದಲಾವಣೆ ಮಾಡುವ ಕುರಿತು ಇತ್ತೀಚೆಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ವಾಯುಪಡೆಯು ಸೇನಾಪಡೆಗೆ ವಾಯುಬಲ ತುಂಬುವ ಘಟಕವಾಗಿ ಕೆಲಸ ಮಾಡಲಿದೆ ಎಂದು ರಾವತ್ ಹೇಳಿದ್ದರು. ಇದಕ್ಕೆ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಏರ್‌ ಚೀಫ್ ಮಾರ್ಷಲ್ ಆರ್‌.ಕೆ.ಎಸ್. ಬಧೌರಿಯಾ, ವಾಯುಪಡೆ ಪಾತ್ರ ನಿರ್ಣಾಯಕ ಎಂದು ಪ್ರತಿಪಾದಿಸಿದ್ದರು.

ಪ್ರಸ್ತಾವಿತ ಸೇನಾ ಸುಧಾರಣೆ ಹೇಗಿದೆ?

17 ಸ್ವತಂತ್ರ ಕಮಾಂಡ್‌ಗಳನ್ನು ಐದು ಕಮಾಂಡ್‌ಗಳಾಗಿ ಪುನರ್‌ರೂಪಿಸುವ ವಿಚಾರವು ಪ್ರಸ್ತಾವಿತ ಸೇನಾ ಸುಧಾರಣೆಯಲ್ಲಿದೆ. ವಾಯುಪಡೆ‌ ನೇತೃತ್ವದಲ್ಲಿ ಏರ್ ಡಿಫೆನ್ಸ್ ಕಮಾಂಡ್, ನೌಕಾಪಡೆ ನೇತೃತ್ವದಲ್ಲಿ ಮೆರಿಟೈಮ್ ಕಮಾಂಡ್ ಹಾಗೂ ಸೇನೆ ನೇತೃತ್ವದಲ್ಲಿ ಮೂರು ಭೂಸೇನಾ ಕಮಾಂಡ್‌ಗಳು ಕೆಲಸ ಮಾಡಲಿವೆ.

ಸೇನೆ ನೇತೃತ್ವದ ಪೂರ್ವ ಕಮಾಂಡ್ ಹಾಗೂ ಉತ್ತರ ಕಮಾಂಡ್‌ಗಳಿಗೆ ವಿವಾದಿತ ಭಾರತ–ಚೀನಾ ಗಡಿಯಲ್ಲಿ ಉಂಟಾಗುವ ಯಾವುದೇ ಬೆದರಿಕೆಯನ್ನು ನಿರ್ವಹಿಸುವ ಜವಾಬ್ದಾರಿ ನೀಡಲಾಗಿದೆ. ಮತ್ತೊಂದು ಘಟಕವಾದ ಪಶ್ಚಿಮ ಕಮಾಂಡ್‌ಗೆ ಭಾರತ–ಪಾಕ್ ಗಡಿಯ ಹೊಣೆ ನೀಡುವ ಪ್ರಸ್ತಾವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT