ಪಣಜಿ (ಪಿಟಿಐ):ಗೋವಾದಲ್ಲಿ ಅತಂತ್ರ ವಿಧಾನಸಭೆ ಏರ್ಪಡಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ರಾಜಕೀಯ ಚುಟುವಟಿಕೆಗಳು ಬಿರುಸುಗೊಂಡಿವೆ.
ಫಲಿತಾಂಶ ಘೋಷಣೆಗೂ ಮುನ್ನ, ಅಭ್ಯರ್ಥಿಗಳನ್ನು ರೆಸಾರ್ಟ್ಗೆ ಸ್ಥಳಾಂತರಿಸಲು ಕಾಂಗ್ರೆಸ್ ಮುಂದಾಗಿದೆ. ಉತ್ತರ ಗೋವಾದ ರೆಸಾರ್ಟ್ವೊಂದರಲ್ಲಿ ಬುಧವಾರ ಉಳಿದುಕೊಳ್ಳಲಿರುವ ಪಕ್ಷದ ಅಭ್ಯರ್ಥಿಗಳು, ಅಲ್ಲಿಂದಲೇ ಮತ ಎಣಿಕೆ ಕೇಂದ್ರಗಳಿಗೆ ತೆರಳಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
---
ಗೋವಾ: ಶಿವಕುಮಾರ್ ವಿಶೇಷ ವೀಕ್ಷಕ
ಪಣಜಿ: ಸಂಕಷ್ಟ ಕಾಲದಲ್ಲಿ ನೆರವಿಗೆ ಬಂದು, ಪರಿಹಾರ ನೀಡಬಲ್ಲರು ಎಂದೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷವು ಗೋವಾದ ವಿಶೇಷ ವೀಕ್ಷಕರನ್ನಾಗಿ ನಿಯೋಜಿಸಿದೆ.
ಮತ್ತೊಬ್ಬ ಮುಖಂಡ ಸತೀಶ ಜಾರಕಿಹೊಳಿ ಅವರು ಸಹ ಗೋವಾಕ್ಕೆ ಆಗಮಿಸಿದ್ದು, ಮತ ಎಣಿಕೆಗೂ ಮುನ್ನ ಪಕ್ಷದ ಮಟ್ಟದಲ್ಲಿ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಿದ್ದಾರೆ.
ಗುರುವಾರ (ಮಾರ್ಚ್ 10) ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಪೈಪೋಟಿ ಇರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ಶಿವಕುಮಾರ್ ಅವರ ನಿಯೋಜನೆಗೆ ಮಹತ್ವ ಬಂದಿದೆ.