ನವದೆಹಲಿ: ಆಮ್ಲಜನಕ ಸಿಲಿಂಡರ್ ವ್ಯವಸ್ಥೆ ಮಾಡುವಲ್ಲಿ ಸ್ಪಷ್ಟ ಯೋಜನೆಯ ಕೊರತೆ, ಸರ್ಕಾರದ ಅಸಮರ್ಥತೆ ಕೋವಿಡ್ ಎರಡನೇ ಅಲೆಯಲ್ಲಿ ಸಮಸ್ಯೆ ಗಂಭೀರವಾಗಲು ಕಾರಣವಾಯಿತು ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಕೋವಿಡ್ ವೈಫಲ್ಯ ಕುರಿತಂತೆ ಸರ್ಕಾರವನ್ನು ಪ್ರಶ್ನಿಸಲು ಆರಂಭಿಸಿರುವ ‘ಯಾರು ಹೊಣೆ?’ ಅಭಿಯಾನದಲ್ಲಿ ಮಾತನಾಡಿದ ಅವರು, ಸರ್ಕಾರ ತನ್ನ ಕ್ರಮಗಳಿಗೆ ಉತ್ತರ ಹೇಳಲು ಇದು ಸಕಾಲ ಎಂದಿದ್ದಾರೆ.
2020ನೇ ಸಾಲಿನಲ್ಲಿ ಭಾರತದ ಆಮ್ಲಜನಕ ರಫ್ತು ಪ್ರಮಾಣ ಶೇ 700ರಷ್ಟು ಹೆಚ್ಚಿದೆ. ಆದರೆ, ದೇಶದಲ್ಲಿಯೇ ಬೇಡಿಕೆ ಹೆಚ್ಚಿದ್ದಾಗ ಪೂರಕವಾಗಿ ಆಮದು ಮಾಡಿಕೊಳ್ಳಲು ಕ್ರಮವಹಿಸಲಿಲ್ಲ ಎಂದು ಆರೋಪಿಸಿದರು.
ಮೋದಿ ನೇತೃತ್ವದ ಸರ್ಕಾರಕ್ಕೆ ಸ್ಪಷ್ಟ ಯೋಜನೆಗಳೇ ಇರಲಿಲ್ಲ. ಅಸಮರ್ಥತೆಯೂ ಇತ್ತು. ಇದು, ಒಟ್ಟಾರೆ ಆಮ್ಲಜನಕ ಕೊರತೆ ಹಾಗೂ ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಯಿತು. ಆಮ್ಲಜನಕ ಒದಗಿಸಲು ಸಮಗ್ರ ಯೋಜನೆಯೇ ಇರಲಿಲ್ಲ. ಈಗ ಸಾರ್ವಜನಿಕರ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ಕುರಿತಂತೆ ಸಂಸದೀಯ ಸಮಿತಿಯ ವರದಿಯನ್ನು ಕಡೆಗಣಿಸಿದ್ದು ಏಕೆ ಹಾಗೂ ಆಮ್ಲಜನಕ ಸಿಲಿಂಡರ್ಗಳು ಮತ್ತು ಮರುಭರ್ತಿ ಕುರಿತ ದರದ ಮೇಲೆ ನಿಯಂತ್ರಣ ಏಕಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ.