ನವದೆಹಲಿ: ಈ ವರ್ಷದ ಜುಲೈ ತಿಂಗಳಿಂದ ಆರಂಭವಾಗಲಿರುವ ಮುಂಗಾರು ಋತುವಿನಲ್ಲಿ ಹೆಚ್ಚುವರಿ 6.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆ ಬೆಳೆಯಲು ಬಹುಮುಖಿ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಇದಲ್ಲದೆ, 2021–22ರಲ್ಲಿ ಹೆಚ್ಚುವರಿ ಇಳುವರಿ ನೀಡುವ ಸೋಯಾಬೀನ್ ಮತ್ತು ನೆಲಗಡಲೆಯಂತಹ ಎಣ್ಣೆಕಾಳುಗಳ ಬೀಜವನ್ನು ಉಚಿತವಾಗಿ ರೈತರಿಗೆ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಕಳೆದ ವರ್ಷ ಮುಂಗಾರು ಋತುವಿನಲ್ಲಿ 208.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮತ್ತು ರಾಬಿ ಋತುವಿನಲ್ಲಿ 80ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳನ್ನು ಬೆಳೆಯಲಾಗಿತ್ತು.
ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಕೃಷಿ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಕರ್ನಾಟಕ, ತೆಲಂಗಾಣ ಮತ್ತು ಛತ್ತೀಸಗಡ ರಾಜ್ಯಗಳ 41 ಜಿಲ್ಲೆಗಳಿಗೆ ಅಂತರ ಬೆಳೆಗಾಗಿ ₹76.03 ಕೋಟಿ ಮೌಲ್ಯದ ಸೋಯಾಬೀನ್ ಬೀಜಗಳನ್ನು ವಿತರಿಸಲಾಗುವುದು ಎಂದೂ ತಿಳಿಸಿದೆ.
ಹೆಚ್ಚು ಉತ್ಪಾದನೆ ಸಂಭಾವ್ಯತೆ ಇರುವ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಕರ್ನಾಟಕ, ಉತ್ತರ ಪ್ರದೇಶ, ಛತ್ತೀಸಗಡ ಮತ್ತು ಗುಜರಾತ್ನ 73 ಜಿಲ್ಲೆಗಳ 3.90ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ₹104 ಕೋಟಿ ಮೌಲ್ಯದ ಸೋಯಾಬೀನ್ ಬೀಜಗಳನ್ನು ವಿತರಿಸಲಾಗುವುದು ಎಂದಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ, ತೆಲಂಗಾಣ, ಛತ್ತೀಸಗಡ, ಗುಜರಾತ್, ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳ 90 ಜಿಲ್ಲೆಗಳಿಗೆ ಎಣ್ಣೆಕಾಳು ಬೀಜದ ಅಂದಾಜು 8.16 ಲಕ್ಷ ಸಣ್ಣ ಕಿಟ್ಗಳನ್ನು ವಿತರಿಸಲಾಗುವುದು ಎಂದೂ ಹೇಳಿದೆ.
ನೆಲಗಡಲೆ ಬೀಜದ ಸುಮಾರು 74 ಸಾವಿರ ಸಣ್ಣ ಕಿಟ್ಗಳನ್ನು ಗುಜರಾತ್, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ತಮಿಳುನಾಡಿಗೆ ವಿತರಿಸಲಾಗುವುದು ಎಂದೂ ಸಚಿವಾಲಯ ತಿಳಿಸಿದೆ.