ಕೋಲ್ಕತ್ತ: ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಸಂಬಂಧ ಕಾನೂನು ರಚಿಸುವಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ರಾಮ್ ಮಾಧವ ಹೇಳಿದ್ದಾರೆ.
ಸರ್ಕಾರವನ್ನು ಉರುಳಿಸಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಸಾಮಾಜಿಕ ಮಾಧ್ಯಮಗಳು ಹೊಂದಿವೆ. ಇವು ಒಡ್ಡಿರುವ ಸವಾಲುಗಳಿಗೆ ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ಪರಿಹಾರ ಕಂಡುಹಿಡಿಯಬೇಕು ಎಂದೂ ಅವರು ಹೇಳಿದರು.
ಪ್ರಭಾ ಖೇತಾನ್ ಪ್ರತಿಷ್ಠಾನ ಆಯೋಜಿಸಿದ್ದ, ತಮ್ಮ ಕೃತಿ ‘ಬಿಕಾಸ್ ಇಂಡಿಯಾ ಕಮ್ಸ್ ಫಸ್ಟ್’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಕೀಯೇತರ ಹಾಗೂ ಸರ್ಕಾರೇತರ ಶಕ್ತಿಗಳ ಉದಯದೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಒತ್ತಡ ಅನುಭವಿಸುತ್ತಿದೆ. ಈ ಶಕ್ತಿಗಳಿಂದಾಗಿ ಹೊಸ ಸವಾಲುಗಳನ್ನು ಸಹ ಎದುರಿಸುತ್ತಿದೆ’ ಎಂದು ವಿಶ್ಲೇಷಿಸಿದರು.
‘ಈ ನವ ಮಾಧ್ಯಮಗಳನ್ನು ನಿಯಂತ್ರಿಸಲು ಈಗಿರುವ ಕಾನೂನುಗಳಿಂದ ಸಾಧ್ಯ ಇಲ್ಲ. ಇದಕ್ಕಾಗಿ ಹೊಸ ನಿಯಮ–ಕಾನೂನು ರೂಪಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ’ ಎಂದೂ ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಹಲವಾರು ನಿರ್ಣಯಗಳನ್ನು ಈ ಕೃತಿಯಲ್ಲಿ ಅವಲೋಕಿಸಿರುವೆ’ ಎಂದರು.