ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆತ; ವ್ಯಕ್ತಿಗೆ 18ತಿಂಗಳು ಜೈಲು

Last Updated 4 ಜೂನ್ 2021, 10:07 IST
ಅಕ್ಷರ ಗಾತ್ರ

ಅಹಮದಾಬಾದ್: 2012ರಲ್ಲಿ ಗುಜರಾತ್‌ ಹೈಕೋರ್ಟ್ ನ್ಯಾಯಮೂರ್ತಿಕೆ.ಎಸ್‌.ಜಾವೇರಿ ಮೇಲೆ ಚಪ್ಪಲಿ ಎಸೆದ ಪ್ರಕರಣದಡಿ ರಾಜ್‌ಕೋಟ್‌ ಜಿಲ್ಲೆಯ ಚಹಾ ಮಾರಾಟಗಾರನೊಬ್ಬನಿಗೆ ನ್ಯಾಯಾಲಯವೊಂದು 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ ಮಿರ್ಜಾಪುರ ಗ್ರಾಮೀಣ ನ್ಯಾಯಾಲಯದ ಸಿಜೆಎಂ ವಿ.ಎ ದಡಾಳ್ ಅವರು,‘ ಭವಾನಿದಾಸ್‌ ಬಾವಜೀ ಎಂಬುವವರಿಗೆ 18 ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿದರು.

ಹಲವು ವರ್ಷಗಳಿಂದ ತನ್ನ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಈ ಬಗ್ಗೆ ಹತಾಶೆಗೊಂಡು ತಾನು ಹೈಕೋರ್ಟ್‌ ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆದಿರುವುದಾಗಿ ಬಾವಜೀ ಪೊಲೀಸರಿಗೆ ತಿಳಿಸಿದ್ದರು.

‘ಈ ರೀತಿಯ ನಡೆ ಅತ್ಯಂತ ಖಂಡನೀಯ. ಭವಾನಿದಾಸ್‌ಗೆ 18 ತಿಂಗಳ ಸರಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು. ಅವರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ದಂಡವನ್ನು ವಿಧಿಸುವುದಿಲ್ಲ’ ಎಂದು ನ್ಯಾಯಾಲಯವು ಹೇಳಿದೆ.

ರಸ್ತೆ ಬದಿಯಲ್ಲಿರುವ ಚಹಾದ ಅಂಗಡಿಯನ್ನು ತೆರವುಗೊಳಿಸುವಂತೆ ಭಯವದಾರ್‌ ನಗರ ಪಾಲಿಕೆಯು ಭವಾನಿದಾಸ್‌ ಬಾವಜೀಗೆ ಸೂಚಿಸಿತ್ತು. ಇದಕ್ಕೆ ಗೊಂಡಾಲ್‌ ಸೆಷನ್ಸ್‌ ಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ನಗರ ಪಾಲಿಕೆಯು ಹೈಕೋರ್ಟ್‌ ಮೊರೆ ಹೋಗಿತ್ತು.

‘ಅಂಗಡಿ ತೆರವುಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬ ಕಾರಣ ನೀಡಿ, ನನ್ನ ಚಹಾ ಅಂಗಡಿಯನ್ನು ತೆರವುಗೊಳಿಸಲಾಯಿತು. ಇದರಿಂದಾಗಿ ನಾನು ಉದ್ಯೋಗ ಕಳೆದುಕೊಂಡೆ. ವಿಚಾರಣೆಗೆ ಹಾಜರಾಗಲು ಕೂಡ ಬೇರೆ ಅವರಿಂದ ಹಣ ಪಡೆದು ಅಹಮದಾಬಾದ್‌ಗೆ ಬರಬೇಕಾಗಿತ್ತು. ಬಹಳ ಸಮಯವಾದರೂ ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ. ಇದರಿಂದ ಹತಾಶೆಗೊಂಡು ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆದೆ’ ಎಂದು ಬಾವಜೀ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT