ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್ಯಾಲಿಗಳಲ್ಲಿ, ಪದೇ ಪದೇ ಆ್ಯಂಬುಲೆನ್ಸ್ಗಳು ಬರುತ್ತಿವೆ. ಹೀಗಾಗಿ ಅದನ್ನು ಸ್ಟಾರ್ ಪ್ರಚಾರಕನನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಛೇಡಿಸಿದೆ.
‘ನನಗೆ ಎರಡು ಬೇಡಿಕೆಗಳಿವೆ. ಮೊದಲನೆಯದು, ಪ್ರಧಾನಿಯವರ ಈ ಭದ್ರತಾ ವೈಫಲ್ಯವನ್ನು ಯಾವುದೇ ಪಕ್ಷಪಾತ ಇಲ್ಲದೆ ತನಿಖೆ ಮಾಡಬೇಕು. ಯಾಕೆಂದರೆ ಪ್ರತಿಬಾರಿಯೂ ಅವರು ಚುನಾವಣಾ ಪ್ರಚಾರಕ್ಕೆ ತೆರಳುವಾಗ, ಆ್ಯಂಬುಲೆನ್ಸ್ ಯಾವುದೇ ಭದ್ರತಾ ತಪಾಸಣೆ ಇಲ್ಲದೆ ಬರುತ್ತದೆ. ಇದು ಕಾಕತಾಳಿಯವಾಗಲು ಸಾಧ್ಯವಿಲ್ಲ‘ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೇಳಿದ್ದಾರೆ.
ಅಲ್ಲದೇ ಪದೇ ಪದೇ ಬರುವ ಆ್ಯಂಬುಲೆನ್ಸ್ ಅನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.
ಗುರುವಾರ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ರೋಡ್ ಶೋ ವೇಳೆ ಆಗಮಿಸಿದ ಆ್ಯಂಬುಲೆನ್ಸ್ ಒಂದಕ್ಕೆ ಪ್ರಧಾನಿ ಮೋದಿಯವರ ಬೆಂಗಾವಲು ವಾಹನ ದಾರಿ ಮಾಡಿಕೊಟ್ಟಿತ್ತು.
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಪ್ರಧಾನಿಗೆ ಭದ್ರತೆ ನೀಡುವ ಬೆಂಗಾವಲು ವಾಹನ ಬಿಟ್ಟರೆ, ಬೇರಾವ ವಾಹನ ಬರಲೂ ಅನುಮತಿ ಇಲ್ಲದ ರಸ್ತೆಯಲ್ಲಿ ಆ್ಯಂಬುಲೆನ್ಸ್ ಬರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.