ವಿಡಿಯೊ ಸಮೀಕ್ಷೆಯ ವರದಿಯನ್ನು ಮಂಗಳವಾರ ಸಲ್ಲಿಸಬೇಕು ಎಂದು ವಾರಾಣಸಿ ನ್ಯಾಯಾಲಯವು ಈ ಹಿಂದೆ ಸೂಚಿಸಿತ್ತು. ಆದರೆ ವರದಿ ಸಲ್ಲಿಕೆಗೂ ಮುನ್ನವೇ, ಮಸೀದಿಯ ಒಳಭಾಗದ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಕೆಲವು ಹಿಂದೂ ವಕೀಲರು ಸೋಮವಾರವೇ ಹೇಳಿದ್ದರು. ಈ ಬಗ್ಗೆ ವಾರಾಣಸಿ ನ್ಯಾಯಾಲಯವು ಮಂಗಳವಾರದ ವಿಚಾರಣೆ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ‘ಅಜಯ್ ಕುಮಾರ್ ಮಿಶ್ರಾ ಅವರು ನಿಯೋಜಿಸಿದ್ದ ಕ್ಯಾಮೆರಾಮನ್, ವಿಡಿಯೊ ಸಮೀಕ್ಷೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಲೇ ಇದ್ದಾರೆ. ಇದು ನ್ಯಾಯಾಂಗ ಘನತೆಗೆ ವಿರುದ್ಧವಾದುದು. ಈ ಕಾರಣದಿಂದ ಅಜಯ್ ಕುಮಾರ್ ಮಿಶ್ರಾ ಅವರನ್ನು ನ್ಯಾಯಾಲಯ ಕಮಿಷನರ್ ಹುದ್ದೆಯಿಂದ ತಕ್ಷಣವೇ ವಜಾ ಮಾಡಲಾಗಿದೆ’ ಎಂದು ಹೇಳಿತು.ವಿಡಿಯೊ ಸಮೀಕ್ಷೆ ಆಯೋಗದ ಕಮಿಷನರ್ ಆಗಿ ವಿಶಾಲ್ ಸಿಂಗ್ ಅವರನ್ನು ನೇಮಕ ಮಾಡಿತು.