ನವದೆಹಲಿ: ಹರಿಯಾಣದ ಕರ್ನಾಲ್ನಲ್ಲಿ ಪ್ರತಿಭಟನೆ ನಡೆಸಿದ ರೈತರ ತಲೆ ಒಡೆಯುವಂತೆ ಹೇಳಿಕೆ ನೀಡಿದ್ದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಭರವಸೆ ನೀಡಿದ್ದಾರೆ.
‘ಐಎಎಸ್ ಅಧಿಕಾರಿ ಇಂತಹ ಭಾಷೆ ಬಳಸಿರುವುದು ಖಂಡನೀಯ. ಸರ್ಕಾರ ಸೂಕ್ತ ಕ್ರಮಕೈಗೊಳ್ಳುವುದು ಖಚಿತ. ಆದರೆ, ಪೊಲೀಸರ ಮೇಲೆ ರೈತರು ಕಲ್ಲು ತೂರಾಟ ನಡೆಸಿರುವುದು ಸಹ ಖಂಡನೀಯ’ ಎಂದು ಹೇಳಿದ್ದಾರೆ.
2018ರ ಬ್ಯಾಚ್ನ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಹೇಳಿಕೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಇವರು ಸರ್ಕಾರಿ ತಾಲಿಬಾನ್’ ಎಂದು ಟೀಕಿಸಿದ್ದಾರೆ. ಈ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.
ಹರಿಯಾಣದಲ್ಲಿ ನೂಹ್ನಲ್ಲಿ ರೈತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಅವರು ನಮ್ಮನ್ನು ಖಲಿಸ್ತಾನಿಗಳಿಗೆ ಹೋಲಿಸುತ್ತಿದ್ದಾರೆ. ನಮ್ಮನ್ನು ಪಾಕಿಸ್ತಾನಿಗಳು ಸಹ ಎಂದು ಕರೆಯುತ್ತಾರೆ. ಹಾಗಿದ್ದರೆ ಇವರು ಸರ್ಕಾರಿ ತಾಲಿಬಾನಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಕ್ರಮಗಳನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಸಮರ್ಥಿಸಿಕೊಂಡಿದ್ದಾರೆ.