ಪಟ್ನಾ: ‘ನಿತೀಶ್ ಕುಮಾರ್ ಅವರಿಗೆ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಿದೆ’ ಎಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್ ಅವರು ಭಾನುವಾರ ತಿರುಗೇಟು ನೀಡಿದ್ದಾರೆ. ‘ಎನ್ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸೇರಿಸಿಕೊಳ್ಳುವಂತೆ ನಿತೀಶ್ ಅವರು ಬೇಡಿಕೊಂಡಿದ್ದರೇ?’ ಎಂದಿದ್ದಾರೆ.
ಶನಿವಾರ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರು, ‘ಪ್ರಧಾನಮಂತ್ರಿ ಆಗುವ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ನಿತೀಶ್ ಅವರು ಬಿಜೆಪಿ ಮೈತ್ರಿಯನ್ನು ತೊರೆದು ಕಾಂಗ್ರೆಸ್ ಹಾಗೂ ಆರ್ಜೆಡಿ ಜೊತೆ ಕೈಜೋಡಿಸಿದ್ದಾರೆ. ಪಕ್ಷದ ಬಾಗಿಲು ಅವರಿಗೆ ಶಾಶ್ವತವಾಗಿ ಮುಚ್ಚಿದೆ’ ಎಂದಿದ್ದರು.
‘ಬಿಜೆಪಿಯೊಂದಿಗೆ ಕೈಜೋಡಿಸಲು ನಿತೀಶ್ ಅವರು ಬೇಡಿಕೊಂಡಿದ್ದರೇ? ಪ್ರಧಾನಿ ನರೇಂದ್ರ ಮೋದಿ ಅವರು 2017ರಲ್ಲಿ ಮನವೊಲಿಕೆ ಮಾಡಿದ್ದರಿಂದ ನಿತೀಶ್ ಅವರು ಎನ್ಡಿಎ ಮೈತ್ರಿಕೂಟಕ್ಕೆ ಸೇರಿಕೊಂಡಿದ್ದರು. ಈ ಕುರಿತು ಅಮಿತ್ ಶಾ ಅವರು ನೆನಪಿಸಿಕೊಳ್ಳಬೇಕು’ ಎಂದರು.
‘ನಿತೀಶ್ ಹಾಗೂ ಜೆಡಿಯು ಪಕ್ಷವು ಮೈತ್ರಿಕೂಟದೊಂದಿಗೆ ಇಲ್ಲದಿರುವುದರ ಬಿಸಿ ಬಿಜೆಪಿಗೆ ತಟ್ಟಿದೆಯೇ’ ಎಂದು ಜೆಡಿಯುನ ಮತ್ತೊಬ್ಬ ಮುಖಂಡ ವಿಜಯ್ ಕುಮಾರ್ ಚೌಧರಿ ಕೇಳಿದ್ದಾರೆ. ‘ಪದೇ ಪದೇ ಅಮಿತ್ ಶಾ ಅವರು ಒಂದು ವಿಷಯವನ್ನೇ ಯಾಕೆ ಮಾತನಾಡುತ್ತಾರೆ’ ಎಂದೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.