ನವದೆಹಲಿ: ಸುದರ್ಶನ ವಾಹಿನಿಯ ವಿವಾದಿತ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಪ್ರಸಾರಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಈ ಕಾರ್ಯಕ್ರಮದ ಪ್ರಸಾರವು ಶುಕ್ರವಾರ ರಾತ್ರಿ 8 ಗಂಟೆಗೆ ನಿಗದಿಯಾಗಿತ್ತು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವುಕಾರ್ಯಕ್ರಮದ ಪ್ರಸಾರಕ್ಕೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾಲಯದ ಹಾಲಿ ಹಾಗೂ ಹಿರಿಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು ಕೇಂದ್ರ ಸರ್ಕಾರ, ಸುದರ್ಶನ ನ್ಯೂಸ್ ಹಾಗೂ ಅದರ ಮುಖ್ಯಸ್ಥ ಸುರೇಶ್ ಚಾವಂಕೆಗೆ ನೋಟಿಸ್ ಜಾರಿಗೊಳಿಸಿ, ಶೀಘ್ರವೇ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದ್ದಾರೆ.
ಸುದರ್ಶನ ವಾಹಿನಿಯ ಮುಖ್ಯಸ್ಥ ಸುರೇಶ್ ಚಾವಂಕೆ ಅವರು ಆಗಸ್ಟ್ 25 ರಂದು ‘ಭಾರತದ ಅಧಿಕಾರಿಶಾಹಿಯಲ್ಲಿ ಮುಸ್ಲಿಮರ ನುಸುಳುಕೋರತನ’ ಎಂದು ಟ್ವೀಟ್ ಮಾಡಿದ್ದರು. ಯುಪಿಎಸ್ಪಿ ಪರೀಕ್ಷೆಯನ್ನು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣವಾಗುತ್ತಿರುವುದರ ಹಿಂದಿನ ಮರ್ಮವೇನು. ಈ ಕುರಿತ ಸರಣಿ ಕಾರ್ಯಕ್ರಮವು ಆಗಸ್ಟ್ 28ರಿಂದ ಪ್ರತಿ ಶುಕ್ರವಾರ ರಾತ್ರಿ 8ಕ್ಕೆ ಪ್ರಸಾರಗೊಳ್ಳಲಿದೆ ಎಂದೂ ಬರೆದಿದ್ದರು. ಆ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ಎಸ್ಎಸ್ಗೆ ಟ್ಯಾಗ್ ಮಾಡಿದ್ದರು.
ಯುಪಿಎಸ್ಸಿ ಜಿಹಾದ್ ಎಂಬ ಹ್ಯಾಷ್ಟ್ಯಾಗ್ ಕೂಡ ಬಳಸಿದ್ದರು.