ಮುಂಬೈ: ಎಲ್ಗಾರ್ ಪರಿಷತ್– ಮಾವೊವಾದಿ ಸಂಪರ್ಕ ಪ್ರಕರಣದ ಆರೋಪಿ, ವಕೀಲೆ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ‘ಡೀಫಾಲ್ಟ್ ಜಾಮೀನು’ ಮಂಜೂರು ಮಾಡಿದೆ. ಆದರೆ ಇದೇ ಪ್ರಕರಣದಲ್ಲಿನ ಇತರ ಎಂಟು ಆರೊಪಿಗಳ ಮನವಿಯನ್ನು ತಿರಸ್ಕರಿಸಿದೆ.
ತನಿಖಾಧಿಕಾರಿ ನಿಗದಿತ ಅವಧಿಯಲ್ಲಿ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸದ ಕಾರಣಕ್ಕೆ ಸುಧಾ ಅವರಿಗೆ ಈ ಜಾಮೀನು ದೊರೆತಿದೆ.
ನ್ಯಾಯಮೂರ್ತಿ ಎಸ್.ಎಸ್.ಶಿಂದೆ ಮತ್ತು ಎನ್.ಜೆ.ಜಮಾದಾರ್ ಅವರ ಪೀಠವು, ಸುಧಾ ಅವರನ್ನು ಇದೇ 8ರಂದು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿತು. ಅವರ ಬಿಡುಗಡೆ ದಿನಾಂಕ ಮತ್ತು ಜಾಮೀನಿಗೆ ಸಂಬಂಧಿಸಿದ ಷರತ್ತುಗಳನ್ನು ವಿಶೇಷ ನ್ಯಾಯಾಲಯ ನಿರ್ಧರಿಸಲಿದೆ ಎಂದು ಪೀಠ ತಿಳಿಸಿತು.
ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 16 ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರ ಪೈಕಿ ‘ಡೀಫಾಲ್ಟ್ ಜಾಮೀನು’ ಪಡೆದ ಮೊದಲ ವ್ಯಕ್ತಿ ಸುಧಾ ಭಾರದ್ವಾಜ್.
ಈ ಪ್ರಕರಣದ ಆರೋಪಿಯಾಗಿರುವ ಕವಿ ವರವರ ರಾವ್ ಅವರು ಪ್ರಸ್ತುತ ವೈದ್ಯಕೀಯ ಜಾಮೀನಿನ ಮೇಲೆ ಹೊರಗಿದ್ದಾರೆ. ಸ್ಟ್ಯಾನ್ ಸ್ವಾಮಿ ಅವರು ವೈದ್ಯಕೀಯ ಜಾಮೀನಿನ ನಿರೀಕ್ಷೆಯಲ್ಲಿದ್ದಾಗ ಈ ವರ್ಷದ ಜುಲೈ 5 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಉಳಿದವರೆಲ್ಲರೂ ವಿಚಾರಣಾಧೀನ ಕೈದಿಗಳಾಗಿ ಬಂಧನದಲ್ಲಿದ್ದಾರೆ.