ಮುಂಬೈ: ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್ಸಿಬಿ) ವಿರುದ್ಧ ಟೀಕೆ ಮಾಡದಂತೆ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಪಿಐಎಲ್ನ ತುರ್ತು ವಿಚಾರಣೆಗೆ ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಮಾದಕ ವ್ಯಸನಿಗಳ ಪುನರ್ವಸತಿಗಾಗಿ ಕೆಲಸ ಮಾಡುತ್ತಿರುವ ಕೌಸರ್ ಅಲಿ ಎಂಬುವವರು ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂ.ಎಸ್. ಕಾರ್ಣಿಕ್ ಅವರನ್ನೊಳಗೊಂಡ ಪೀಠವು, ಈ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತು. ಮುಂದಿನ ವಾರದಿಂದ ಆರಂಭವಾಗುವ ರಜಾ ಕಾಲದ ಪೀಠ ಅಥವಾ ದೀಪಾವಳಿ ರಜೆಯ ಬಳಿಕ ಪ್ರಾರಂಭವಾಗುವ ನ್ಯಾಯ ಪೀಠಗಳ ಮೊರೆ ಹೋಗುವಂತೆ ಸೂಚಿಸಿತು.
ಮಲಿಕ್ ಅವರ ಇತ್ತೀಚಿನ ಕೆಲ ಟ್ವೀಟ್ಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದ ಕೌಸರ್ ಅಲಿ ಅವರು, ಸಚಿವರು ಎನ್ಸಿಬಿ ಮತ್ತು ಅದರ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ‘ನಿರುತ್ಸಾಹಗೊಳಿಸುವಂತೆ’ ಟ್ವೀಟ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಹೀಗೆ ತನಿಖಾ ಸಂಸ್ಥೆಗಳನ್ನು ಗುರಿಯಾಗಿಸಿ ಟೀಕೆ ಮಾಡಿದರೆ ಅದು ಆ ಸಂಸ್ಥೆಗಳ ನೈತಿಕತೆಯನ್ನು ಕುಗ್ಗಿಸುತ್ತದೆ. ಅಲ್ಲದೆ ಜನರಲ್ಲಿ ಮಾದಕ ದ್ರವ್ಯ ಸೇವನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಪಿಐಎಲ್ನಲ್ಲಿ ಹೇಳಿದ್ದಾರೆ.