ನವದೆಹಲಿ: ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಮಂಡಳಿ ವಿದ್ಯಾರ್ಥಿಗಳನ್ನು ವೈರಿಗಳಂತೆ ನೋಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಮಂಡಳಿ ಹೊಂದಿದೆ ಎಂದು ಹೇಳಿದ ಹೈಕೋರ್ಟ್, ಇಂಥ ನಿಲುವುಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕದ ತಟ್ಟುವಂತಾಗಿದೆ ಎಂದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿದ್ದ ಪೀಠವು, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮಂಡಳಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯ ವೇಳೆ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ಕೋವಿಡ್ನಿಂದಾಗಿ ಪರೀಕ್ಷೆ ರದ್ದುಪಡಿಸಿರುವ ಸಂದರ್ಭದ ವಿದ್ಯಾರ್ಥಿಗಳಿಗೆ ಅನ್ವಯಿಸಿ ಜಾರಿಗೊಳಿಸಿದ ಮೌಲ್ಯಮಾಪನ ಯೋಜನೆ, ಅಂಕ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳಿಗೂ ಅನ್ವಯಿಸಲಿದೆ ಎಂಬ ಆದೇಶವನ್ನು ಮಂಡಳಿ ಪ್ರಶ್ನಿಸಿತ್ತು.
ಮಂಡಳಿ ವಿದ್ಯಾರ್ಥಿಗಳನನ್ನು ವೈರಿಗಳಂತೆ ನೋಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠವು, ಅಂಕ ಉತ್ತಮಪಡಿಸಿ ಕೊಳ್ಳುವ ಬಯಸುವ ವಿದ್ಯಾರ್ಥಿಗಳಿಗೂ ಅನ್ವಯಿಸಿದರೆ ಆಗುವ ತೊಂದರೆಯಾದರೂ ಏನು ಎಂದು ಪ್ರಶ್ನಿಸಿತು.