ಉದಕಮಂಡಲ (ಪಿಟಿಐ): ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.ಜಿಲ್ಲಾಡಳಿತ ಬುಧವಾರ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿದೆ.
ಬಂಡೆಗಳು ಮತ್ತು ಮರಗಳು ರೈಲು ಹಳಿಗಳ ಮೇಲೆ ಬಿದ್ದಿರುವ ಕಾರಣ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಮಳೆ, ಗಾಳಿಯಿಂದಾಗಿ ಕೂನೂರು ಸಮೀಪ ಐದು ಮನೆಗಳು ಕುಸಿದು ಬಿದ್ದಿವೆ, ಮೂರು ಆಟೊರಿಕ್ಷಾ ಸೇರಿದಂತೆ ಕೆಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರಸ್ತೆ ಮಧ್ಯೆ ದೊಡ್ಡ ದೊಡ್ಡ ಮರಗಳು ಉರುಳಿಬಿದ್ದ ಕಾರಣ ಊಟಿ–ಕೂನೂರು ಮಾರ್ಗದಲ್ಲಿ ಸಂಚಾರಕ್ಕೆ ತೊಡಕುಂಟಾಗಿದೆಎಂದು ಮೂಲಗಳು ತಿಳಿಸಿವೆ.
ಕಂದಾಯ, ಮತ್ತಿತರ ಇಲಾಖೆ ಸಿಬ್ಬಂದಿ ಸಾರ್ವಜನಿಕರ ನೆರವಿನಿಂದ ಮರಗಳನ್ನು ತೆರವು ಮಾಡಿ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
ಬುಧವಾರ ಬೆಳಿಗ್ಗೆ 11 ಗಂಟೆ ವರೆಗೆ ಜಿಲ್ಲೆಯಲ್ಲಿ 303 ಮಿ.ಮೀ ಮಳೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನದಿ ಸಮೀಪದಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಇಡುಕ್ಕಿ (ವರದಿ): ಭಾರಿ ಮಳೆಯ ಪರಿಣಾಮ ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟೆಯ ನೀರಿನ ಮಟ್ಟ 141 ಅಡಿ ಮೀರಿದ್ದು, ಜಿಲ್ಲಾಡಳಿತವು ಎರಡನೇ ಬಾರಿ ಪ್ರವಾಹದ ಎಚ್ಚರಿಕೆ ನೀಡಿದೆ.
‘ಮಂಗಳವಾರ ರಾತ್ರಿ 12 ಗಂಟೆಗೆ ಅಣೆಕಟ್ಟೆಯ ನೀರಿನ ಪ್ರಮಾಣ 141.20 ಅಡಿ ತಲುಪಿದೆ. ನೀರಿನ ಮಟ್ಟ 142 ಅಡಿ ತಲುಪಿದಲ್ಲಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಅಣೆಕಟ್ಟು ಪ್ರದೇಶದಲ್ಲಿನ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಜಿಲ್ಲಾಧಿಕಾರಿ ಶೀಬಾ ಜಾರ್ಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.