ಮುಂಬೈ: ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಆರೋಪ ಸಂಬಂಧ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್.ಜೆ. ಜಾಮದಾರ್ ಅವರಿದ್ದ ಪೀಠವು, ಎಫ್ಐಆರ್ ರದ್ದುಗೊಳಿಸಲು ದೇಶಮುಖ್ ಅವರು ಸಲ್ಲಿಸಿರುವ ಅರ್ಜಿಯು ವಜಾಗೊಳಿಸಲು ಅರ್ಹವಾಗಿದೆ ಎಂದು ಹೇಳಿತು.
ಕೇಂದ್ರೀಯ ತನಿಖಾ ದಳ (ಸಿಬಿಐ) ಹೈಕೋರ್ಟ್ ಆದೇಶದ ಅನುಸಾರ ನಡೆಸಿದ ಪ್ರಾಥಮಿಕ ತನಿಖೆಯ ನಂತರ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಆರೋಪದ ಮೇಲೆ ದೇಶಮುಖ್ ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಕಳೆದ ಏಪ್ರಿಲ್ 24ರಂದು ಎಫ್ಐಆರ್ ದಾಖಲಿಸಿತ್ತು.
ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಯ ನೀಡುವಂತೆ ದೇಶಮುಖ್ ಅವರು ಸಲ್ಲಿಸಿದ್ದ ಮನವಿಯನ್ನೂ ಹೈಕೋರ್ಟ್ ತಿರಸ್ಕರಿಸಿತು.