ನವದೆಹಲಿ: ಅರುಣಾಚಲ ಪ್ರದೇಶದ ಕಮೆಂಗ್ ಎಂಬಲ್ಲಿ ಭಾನುವಾರ ಸಂಭವಿಸಿದ ಹಿಮಪಾತದಲ್ಲಿ ಭಾರತೀಯ ಸೇನೆಯ (ಗಡಿ ಗಸ್ತು ಪಡೆ) ಏಳು ಸೈನಿಕರು ಸಿಲುಕಿದ್ದಾರೆ. ಸೈನಿಕರನ್ನು ಕಾಪಾಡಲು ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
‘ಗಸ್ತು ಪಡೆಯು ಹಿಮಾಲಯದ ಎತ್ತರದ ಪ್ರದೇಶವಾದ ಕಮೆಂಗ್ ಎಂಬಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು. ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಹರ್ಷ ವರ್ಧನ್ ಪಾಂಡೆ ಹೇಳಿದ್ದಾರೆ.
‘ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ರಕ್ಷಣಾ ತಂಡಕ್ಕೆ ನೆರವಾಗಲು ವಿಶೇಷ ತಂಡಗಳನ್ನು ವಿಮಾನದ ಮೂಲಕ ರವಾನಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಚೀನಾದೊಂದಿಗೆ ಹಲವು ಸಂಘರ್ಷಮಯ ಸನ್ನಿವೇಶಗಳನ್ನು ಎದುರಿಸಿರುವ ಭಾರತವು ಪೂರ್ವ ಹಿಮಾಲಯದ ಅರುಣಾಚಲ ಪ್ರದೇಶದಲ್ಲಿ ಗಸ್ತು ತೀವ್ರಗೊಳಿಸಿದೆ. ರಸ್ತೆಗಳು ಮತ್ತು ಸುರಂಗಗಳ ನಿರ್ಮಾಣವನ್ನು ಹೆಚ್ಚಿಸಿದೆ. ಅರುಣಾಚಲವು ಟಿಬೆಟ್ನೊಂದಿಗೆ ಗಡಿ ಹಂಚಿಕೊಂಡಿದೆ.