ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿಯ ತೀತ್ವಾಲ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶಾರದಾ ದೇವಿ ದೇವಸ್ಥಾನದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ದೀಪಾವಳಿ ಆಚರಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲುಸ್ಥಳೀಯರಿಗೆ ಅವಕಾಶ ಸಿಕ್ಕಿದೆ. ಹಣತೆ ಮತ್ತು ಬಣ್ಣದ ದೀಪಗಳಿಂದ ದೇವಸ್ಥಾನವನ್ನು ಸಿಂಗರಿಸಲಾಗಿತ್ತು. ಈ ಆಚರಣೆಯು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಭ್ರಾತೃತ್ವಕ್ಕೆ ಉದಾಹರಣೆಯಾಗಿತ್ತು.
‘ದೀಪಾವಳಿಯಂದು ದೀಪದ ಬೆಳಕು ಜನರಲ್ಲಿ ಹೊಸ ಜೀವನವನ್ನು ಉದ್ದೀಪಿಸಿತು. ಸಮಗ್ರ ಮನುಕುಲದ ಒಳಿತಿಗಾಗಿ ಜನರು ಪ್ರಾರ್ಥನೆ ಸಲ್ಲಿಸಿದರು’ ಎಂದು ಶಾರದಾ ಪೀಠ ಸಮಿತಿಯ ಮುಖ್ಯಸ್ಥ ರವೀಂದ್ರ ಪಂಡಿತ್ ಹೇಳಿದರು.