ವಡೋದರ: ಗುಜರಾತ್ನ ಅಗರಬತ್ತಿ ಕಾರ್ಖಾನೆಯೊಂದರಲ್ಲಿ ಬುಧವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
‘ಮಕರಪುರ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀಜೀ ಅಗರಬತ್ತಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತು. ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ರಾಸಾಯನಿಕಗಳಿಂದಾಗಿ ಬೆಂಕಿ ವೇಗವಾಗಿ ಹರಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಿಗ್ಗೆ 4.30ಕ್ಕೆ ಕರೆ ಬಂತು. ನಾವು ಘಟನಾ ಸ್ಥಳ ತಲುಪುವುದಕ್ಕೂ ಮೊದಲೇ ಪೂರ್ತಿ ಕಾರ್ಖಾನೆಯನ್ನು ಬೆಂಕಿ ಆವರಿಸಿತ್ತು. ಗೋದಾಮು ಪ್ರವೇಶಿಸಲು ಸರಿಯಾದ ಮಾರ್ಗ ಕೂಡ ಇರಲಿಲ್ಲ’ ಎಂದು ಅಗ್ನಿಶಾಮಕ ಅಧಿಕಾರಿ ನಿಕುಂಜ್ ಆಜಾದ್ ಅವರು ಮಾಹಿತಿ ನೀಡಿದರು.