ಸಿಲಿಗುರಿ: ಸಿಕ್ಕಿಂನ ಚಾಂಗು ಸರೋವರದ ಬಳಿ ಶನಿವಾರ ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಸರೋವರದ ಬಳಿ ನೂರಾರು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
ಆ ಪ್ರದೇಶದಲ್ಲಿ ಸೇನೆಯು ರಕ್ಷಣಾ ಕಾರ್ಯಚಾರಣೆ ಕೈಗೊಂಡಿದ್ದು, ಹಲವರನ್ನು ರಕ್ಷಿಸಿದೆ. ಇವರಿಗೆ ಸೇನಾ ಶಿಬಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ಭಾರೀ ಹಿಮಪಾತದಿಂದಾಗಿ ಜವಾಹರಲಾಲ್ ನೆಹರೂ ರಸ್ತೆ ಮುಚ್ಚಿದ್ದರಿಂದ ನೂರಾರು ಪ್ರವಾಸಿಗರು ಚಾಂಗು ಸರೋವರದ ಬಳಿ ಸಿಲುಕಿಕೊಂಡರು ಎಂದು ಅವರು ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ ಹವಾಮಾನ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ ಪ್ರವಾಸಿಗರನ್ನು ಸಣ್ಣ ಗುಂಪುಗಳಾಗಿ ವಿಂಗಡಿಸಿ, ಕಾಲ್ನಡಿಗೆಯ ಮೂಲಕ ಸುಮಾರು 40 ಕಿ.ಮೀ ದೂರದಲ್ಲಿರುವ ಗ್ಯಾಂಗ್ಟಕ್ಗೆ ಕರೆತರಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕ್ರಿಸ್ಮಸ್ ರಜೆ ಪ್ರಯುಕ್ತ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಹಿಮಪಾತದಿಂದಾಗಿ ಇಲ್ಲಿ ಸಿಲುಕಿಕೊಂಡವರ ಪೈಕಿ ಕೋಲ್ಕತ್ತ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳ ಸುಮಾರು 250 ಜನರು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.
ರಕ್ಷಣಾ ಕಾರ್ಯ ಸೋಮವಾರದವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.