ನವದೆಹಲಿ: ನಾನು ಅಪರಾಧಿ ಅಲ್ಲ, ಶೃಂಗಸಭೆಗಾಗಿ ಸಿಂಗಪುರಕ್ಕೆ ಭೇಟಿ ನೀಡಲು ಅನುಮತಿ ನೀಡುವಲ್ಲಿ ಕೇಂದ್ರದ ವಿಳಂಬದ ಹಿಂದೆ ರಾಜಕೀಯ ಕಾರಣ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ.
ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಶೃಂಗಸಭೆಗೆ ತಮ್ಮನ್ನು ಆ ದೇಶದ ಸರ್ಕಾರವು ವಿಶೇಷವಾಗಿ ಆಹ್ವಾನಿಸಿದೆ ಎಂದು ಕೇಜ್ರಿವಾಲ್ ಹೇಳಿದರು. ಅಲ್ಲಿ ನಾನು ದೆಹಲಿ ಮಾದರಿಯನ್ನು ವಿಶ್ವ ನಾಯಕರ ಮುಂದೆ ಪ್ರಸ್ತುತಪಡಿಸುತ್ತೇನೆ ಮತ್ತು ಭಾರತಕ್ಕೆ ಗೌರವ ತರುತ್ತೇನೆ ಎಂದಿದ್ಧಾರೆ.
ಭೇಟಿಗೆ ಕೇಂದ್ರದಿಂದ ಅನುಮತಿ ಪೆಂಡಿಂಗ್ ಇರುವ ಬಗ್ಗೆ ಅಸಮಾಧಾನಗೊಂಡಿರುವ ಕೇಜ್ರಿವಾಲ್, ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಒಂದು ತಿಂಗಳಿನಿಂದ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
‘ನಾನು ಕ್ರಿಮಿನಲ್ ಅಲ್ಲ, ನಾನು ಮುಖ್ಯಮಂತ್ರಿ ಮತ್ತು ದೇಶದ ಮುಕ್ತ ಪ್ರಜೆ. ಸಿಂಗಪುರಕ್ಕೆ ಭೇಟಿ ನೀಡುವುದನ್ನು ತಡೆಯಲು ಯಾವುದೇ ಕಾನೂನಿನ ಆಧಾರವಿಲ್ಲ. ಆದ್ದರಿಂದ, ಇದರ ಹಿಂದೆ ರಾಜಕೀಯ ಕಾರಣ ಇರಬಹುದು’ಎಂದು ಅವರು ಹೇಳಿದ್ದಾರೆ.
ಸಿಂಗಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು ಆಗಸ್ಟ್ ಮೊದಲ ವಾರದಲ್ಲಿ ನಡೆಯಲಿರುವ ವಿಶ್ವ ನಗರಗಳ ಶೃಂಗಸಭೆಗೆ ಆಗಮಿಸುವಂತೆ ಜೂನ್ನಲ್ಲೇ ಕೇಜ್ರಿವಾಲ್ ಅವರಿಗೆ ಆಹ್ವಾನ ನೀಡಿದ್ದರು. ಮೊದಲ ದಿನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವಂತೆ ದೆಹಲಿ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗಿದೆ.
ನಾನು ಸಾಮಾನ್ಯವಾಗಿ ವಿದೇಶಗಳಿಗೆ ಭೇಟಿ ನೀಡುವುದಿಲ್ಲ. ಆದರೆ, ದೇಶದ ಪ್ರಗತಿಗೆ ಸಂಬಂಧಿಸಿದಂತೆ ಸಿಂಗಪುರದ ಶೃಂಗಸಭೆಗೆ ಹೋಗಲು ಉದ್ದೇಶಿಸಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.